ಕಲಾಪ ಮುಂದೂಡಿದರೂ ಜೆಡಿಎಸ್ ಸದಸ್ಯರಿಂದ ಅಹೋರಾತ್ರಿ ಧರಣಿ, ರಾತ್ರಿ ವಿಧಾನಸೌಧಕ್ಕೆ ದೌಡಾಯಿಸಿದ ಸಿಎಂ! | Janata news
ಬೆಂಗಳೂರು : ರಾಜ್ಯ ಸರಕಾರವು ತಮ್ಮ ಕ್ಷೇತ್ರಗಳಿಗೆ ಅನುದಾನ ತಡೆ ಹಿಡಿದಿದೆ ಎಂದು ಸಿಟ್ಟಿಗೆದ್ದ ಜೆಡಿಎಸ್ ಶಾಸಕರು, ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಗುರುವಾರ ಧರಣಿ ನಡೆಸಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ನೀಡಿದ ಉತ್ತರವನ್ನು ಪ್ರತಿಭಟಿಸಿ, ಶಾಸಕರು ಧರಣಿ ನಡೆಸಿದರು. ಅಲ್ಲದೆ, ಸ್ಪೀಕರ್ ಸದನವನ್ನು ನಾಳೆಗೆ ಮುಂದೂಡಿದರೂ, ರಾಜ್ಯ ಸರಕಾರದಿಂದ ಸೂಕ್ತ ಉತ್ತರ ಸಿಗುವವರೆಗೆ ನಾವು ಧರಣಿ ಹಿಂಪಡೆಯುವುದಿಲ್ಲ. ಅಹೋರಾತ್ರಿ ಧರಣಿ ನಡೆಸುವುದಾಗಿ ಜೆಡಿಎಸ್ ಶಾಸಕರು ಪಟ್ಟು ಹಿಡಿದಿದ್ದರು.
ವಿಧಾನಸಭೆ ಸಭಾಂಗಣದಲ್ಲಿ ಅಹೋರಾತ್ರಿ ಧರಣಿಗೆ ಮುಂದಾದ ಜೆಡಿಎಸ್ ಶಾಸಕರ ಮನವೊಲಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕ್ರೀಡಾ ಸಚಿವ ನಾರಾಯಣ ಗೌಡ ರಾತ್ರಿ ಎಂಟು ಗಂಟೆಗೆ ವಿಧಾನಸೌಧಕ್ಕೆ ದೌಡಾಯಿಸಿದ ಪ್ರಸಂಗ ನಡೆಯಿತು.
ಮುಖ್ಯಮಂತ್ರಿಯೊಂದಿಗೇ ಜೆಡಿಎಸ್ ಶಾಸಕರು ವಿಧಾನಸಭೆಯಿಂದ ಹೊರಗೆ ಬಂದರು. ಯಡಿಯೂರಪ್ಪ ಭೇಟಿಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ, ಮೈತ್ರಿ ಸರ್ಕಾರದ ಅವಧಿಯಲ್ಲಿ ಶುರುವಾದ ಕೆಲಸಗಳು ಮುಗಿಯಬೇಕು. ಪ್ರತಿಪಕ್ಷಗಳ ಶಾಸಕರು ಇರುವ ಕ್ಷೇತ್ರಗಳಿಗೂ ಅನುದಾನ ಬಿಡುಗಡೆ ಮಾಡಬೇಕು. ಧರಣಿ ನಡೆಸುವ ಹಿಂದೆ ನಮಗೆ ಬೇರೆ ಯಾವುದೇ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಮೈತ್ರಿ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಂಜೂರಾಗಿ, ಟೆಂಡರ್ ಆಗಿದ್ದ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಹಣಕಾಸು ಕೊರತೆಯಿಂದ ತಡೆಹಿಡಿಯಲಾದ ಯೋಜನೆಗೆ ಆದ್ಯತೆ ಮೇಲೆ ಅನುದಾನ ಬಿಡುಗಡೆ ಮಾಡುವುದಾಗಿ ಸಿಎಂ ಜೆಡಿಎಸ್ ಶಾಸಕರಿಗೆ ಭರವಸೆ ನೀಡಿದರು.