ಶಿವಸೇನೆಗೆ ಎಬಿಸಿಡಿಯಿಂದ ಕನ್ನಡ ಅಕ್ಷರ ಮಾಲೆವರೆಗೆ ಪಾಠ ಕಲಿಸುತ್ತೇವೆ: ಆರ್.ಅಶೋಕ್ | Janata news
ಬೆಳಗಾವಿ : ಗಡಿಯಲ್ಲಿ ಪುಂಡಾಟಿಕೆ ಮಾಡುತ್ತಿರುವ ಶಿವಸೇನೆಗೆ ಪಾಠ ಕಲಿಸುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊಂದಾಣಿಕೆ ಮಾಡಿಕೊಳ್ಳಲ್ಲ. ನೆಲ-ಜಲ ರಕ್ಷಣೆಗೆ ಯಾವುದೇ ಬೆಲೆ ತೆತ್ತಾದರೂ ಗಡಿ ರಕ್ಷಣೆ ಮಾಡಿಕೊಳ್ಳಲಿದೆ.
ರಾಜ್ಯದಲ್ಲಿ ಶಿವಸೇನೆಯನ್ನ ನಿಷೇಧಿಸುವ ಚಿಂತನೆ ನಡೆದಿದೆ. ಆದರೆ ಶಿವಸೇನೆ ಒಂದು ರಾಜಕೀಯ ಪಕ್ಷ. ಹಾಗಾಗಿ ಅದನ್ನ ನಿಷೇಧ ಮಾಡಲು ಅಧಿಕಾರ ಇದೆಯೋ ಇಲ್ಲವೋ ಎನ್ನುವ ಚರ್ಚೆ ನಡೆಯುತ್ತಿದೆ. ಶಿವಸೇನೆಗೆ ಎಬಿಸಿಡಿಯಿಂದ ಹಿಡಿದು ಕನ್ನಡ ಅಕ್ಷರ ಮಾಲೆ ಪಾಠವನ್ನೂ ಹೇಳಿಕೊಡುತ್ತೇವೆ ಎಂದರು.
ಬೆಳಗಾವಿಯಲ್ಲಿ ಶಿವಸೇನೆಯವರ ಪುಂಡಾಟಿಕೆ ನಿಲ್ಲಿಸಲು ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಲಿದ್ದು, ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಯಾರು ಪುಂಡಾಟಿಕೆ ಮಾಡುತ್ತಿದ್ದಾರೆ ಅಂತಹವರನ್ನು ಪೊಲೀಸರು ಮಟ್ಟ ಹಾಕಬೇಕು. ಆಗ ಮಾತ್ರ ಜಿಲ್ಲೆಯಲ್ಲಿ ಶಾಂತಿ ನೆಲಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಬೆಳಗಾವಿ ಲೋಕಸಭೆ ಅಭ್ಯರ್ಥಿ ಬಗ್ಗೆ ಅರುಣ ಸಿಂಗ್ ಜೊತೆಗೆ ನಾನೂ ಒನ್ ಟು ಒನ್ ಮಾತಾಡಿ ಚರ್ಚಿಸಿದ್ದೇನೆ. ನನ್ನ ದೃಷ್ಟಿಯಲ್ಲಿ ಯಾರಿಗೆ ಟಿಕೆಟ್ ಕೊಟ್ಟರೆ ಒಳ್ಳೆಯದು ಎನ್ನುವ ಸಲಹೆ ನೀಡಿದ್ದೇನೆ.
ನಿಷ್ಠಾವಂತ ಕಾರ್ಯಕರ್ತರಿಗೆ ಪಕ್ಷದಲ್ಲಿ ಮೊದಲ ಆದ್ಯತೆ ಇದೆ. ಅದೇ ರೀತಿ ದಿ.ಸುರೇಶ ಅಂಗಡಿಯವರ ಕುಟುಂಬ ಕೂಡ ಪಕ್ಷದೊಂದಿಗೆ ಉತ್ತಮ ಒಡನಾಟ ಹೊಂದಿದೆ. ಈ ವಿಚಾರವನ್ನೂ ಪಕ್ಷದ ಗಮನಕ್ಕೆ ತರಲಾಗಿದೆ. ಆದರೆ ಅಂತಿಮ ನಿರ್ಧಾರ ಹೈಕಮಾಂಡ್ ಮಾಡಲಿದೆ. ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರು ನಾವೆಲ್ಲರು ಸಹಕಾರ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.