ಐಎನ್ಎಕ್ಸ್ ಮೀಡಿಯಾ ಪ್ರಕರಣ : ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ, ಪುತ್ರ ಕಾರ್ತಿ ಗೆ ಕೋರ್ಟ್ ಸಮನ್ಸ್ ಜಾರಿ | Janata news
ನವದೆಹಲಿ : ಐಎನ್ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ, ಅವರ ಪುತ್ರ ಕಾರ್ತಿ ಚಿದಂಬರಂ ಮತ್ತು ಹಲವಾರು ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ದೆಹಲಿ ನ್ಯಾಯಾಲಯ ಬುಧವಾರ ಸಮನ್ಸ್ ಜಾರಿಗೊಳಿಸಿದೆ. ಈ ಹಿಂದೆ ಐಎನ್ಎಕ್ಸ್ ಮಾಧ್ಯಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿ ಅವರನ್ನು ಇಡಿ ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್( ಸಿಬಿಐಸಿಬಿಐ) ವಿಚಾರಣೆ ನಡೆಸಿತ್ತು.
ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಮುಖ್ಯ ಚಾರ್ಜ್ಶೀಟ್ ಆಧಾರಿಸಿ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ. ಎಲ್ಲಾ ಆರೋಪಿಗಳನ್ನು 2021 ರ ಏಪ್ರಿಲ್ 7 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.
ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯಿಂದ(ಎಫ್ಐಪಿಬಿ) ಐಎನ್ಎಕ್ಸ್ ಮೀಡಿಯಾ ಗ್ರೂಪ್ಗೆ ನೀಡಲಾದ ಕ್ಲಿಯರೆನ್ಸ್ನಲ್ಲಿ ಅಕ್ರಮಗಳು ನಡೆದಿವೆ, ಎಂದು ಆರೋಪಿಸಿ ಪಿ ಚಿದಂಬರಂ ಅವರನ್ನು 2019 ರ ಮೇ 21 ರಂದು ಸಿಬಿಐ ಬಂಧಿಸಿತ್ತು.
ಇಡಿಗೆ ಐಎನ್ಎಕ್ಸ್ ಮೀಡಿಯಾ (ಪಿ) ಲಿಮಿಟೆಡ್ನ ಮಾಜಿ ನಿರ್ದೇಶಕಿ ಇಂದ್ರಾನಿ ಮುಖರ್ಜಿಯಾ ಅವರು ನೀಡಿದ ಹೇಳಿಕೆಯ ಆಧಾರದ ಮೇಲೆ 2018ರಲ್ಲಿ ಚಿದಂಬರಂ ಅವರ ಪುತ್ರ ಕಾರ್ತಿಯನ್ನು ಬಂಧಿಸಲಾಯಿತು. 23 ದಿನಗಳ ನಂತರ ಅವರಿಗೆ ಜಾಮೀನು ನೀಡಲಾಯಿತು.
ಯುಪಿಎ-1 ಸರ್ಕಾರದಲ್ಲಿ ಪಿ.ಚಿದಂಬರಂ ಹಣಕಾಸು ಮಂತ್ರಿಯಾಗಿದ್ದಾಗ, ಅವರ ಮಗ ಕಾರ್ತಿ 2007 ರಲ್ಲಿ ಎಫ್ಐಪಿಬಿ 305 ಕೋಟಿ ರೂ.ಗಳಿಗೆ ಕ್ಲಿಯರೆನ್ಸ್ ಪಡೆದ ಆರೋಪ ಹೊರಿಸಲಾಗಿತ್ತು. ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಭಾರತ, ಯುಕೆ ಮತ್ತು ಸ್ಪೇನ್ನಲ್ಲಿರುವ ಕಾರ್ತಿ ಅವರ 54 ಕೋಟಿ ರೂ. ಮೌಲ್ಯದ ಅಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿತ್ತು.