ಸಾಲ ತೀರಿಸಲು ಯುವಕನನ್ನು ಅಪಹರಣ: 2 ಕೋಟಿಗೆ ಬೇಡಿಕೆ ಇಟ್ಟಿದ್ದ 4 ಆರೋಪಿಗಳು ಅರೆಸ್ಟ್ | Janata news
ಬೆಂಗಳೂರು : ತಂಗಿಯ ಮದುವೆಗಾಗಿ ಮಾಡಿದ್ದ ಸಾಲವನ್ನ ತೀರಿಸಲು ಯುವಕನೊಬ್ಬನನ್ನ ಕಿಡ್ನಾಪ್ ಮಾಡಿ 2 ಕೋಟಿ ರೂಪಾಯಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ 6 ಮಂದಿ ಆರೋಪಿಗಳನ್ನು ಕೆಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್ ಫಹಾದ್, ಜಬೀಉಲ್ಲ, ಸಯ್ಯದ್ ಸಲ್ಮಾನ್, ತೌಹೀದ್ ಬಂಧಿತ ಆರೋಪಿಗಳು. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಏಳು ಗಂಟೆಗಳ ಮಿಂಚಿನ ಕಾರ್ಯಾಚರಣೆ ನಡೆಸಿ, ಬೆಂಗಳೂರು ನಗರ ಪೊಲೀಸರು ಸುಖಾಂತ್ಯ ಕಾಣಿಸಿದ್ದಾರೆ. ಅಪಹೃತ ಯುವಕನನ್ನು ಜೀವಂತ ಹಿಂತಿರುಗಿಸಲು 2 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದ 7 ಜನ ದುಷ್ಕರ್ಮಿಗಳನ್ನು ನಗರ ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ 25 ರ ಮಧ್ಯಾಹ್ನ ನಗರದ ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ನರ್ಸಿಂಗ್ ಕಾಲೇಜು ನಡೆಸುವವರ ಮಗ ರಜೀಬ್ ಅರಾಪತ್ ಎಂಬುವನನ್ನು ದುಷ್ಕರ್ಮಿಗಳ ಗ್ಯಾಂಗ್ ಒಂದು ಕಿಡ್ನಾಪ್ ಮಾಡಿತು. ನಾಲ್ಕು ಜನರು ಹುಡುಗಿಯನ್ನು ಚುಡಾಯಿಸುತ್ತಿರುವುದಾಗಿ ಆಪಾದನೆ ಮಾಡುತ್ತಾ ಯುವಕನನ್ನು ಕಾರಿನಲ್ಲಿ ಕೂರಿಸಿಕೊಂಡು ಪರಾರಿಯಾಗಿದ್ದರು.
ಯುವಕನ ತಂದೆಯ ಪರಿಚಯಸ್ತರು ಕರೆ ಮಾಡಿ ನಿಮ್ಮ ಮಗನನ್ನು ಕಾರ್ನಲ್ಲಿ ಯಾರೋ ಅಪಹರಿಸಿಕೊಂಡು ಹೋದರೆಂದು ತಿಳಿಸಿದ್ದಾರೆ. ತಕ್ಷಣ ತಂದೆ ಮಗನ ಮೊಬೈಲ್ಗೆ ಕರೆ ಮಾಡಿದಾಗ ಅದು ಸ್ವಿಚ್ಆಫ್ ಆಗಿದೆ. ಕೂಡಲೇ ಅವರು ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಪಹರಣಕಾರರು ಯುವಕನ ತಂದೆಗೆ ಕರೆ ಮಾಡಿ 2 ಕೋಟಿ ಹಣ ಕೊಟ್ಟರೆ ನಿಮ್ಮ ಮಗನನ್ನು ಬಿಡುತ್ತೇವೆ, ಇಲ್ಲದಿದ್ದರೆ ಕೈ, ಕಾಲು ಕತ್ತರಿಸಿ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ಯುವಕನ ತಂದೆ ನೀಡಿದ ದೂರಿನ ಮೇರೆಗೆ ಅಪಹರಣಕಾರರನ್ನು ಸೆರೆ ಹಿಡಿಯಲು ಪೂರ್ವ ವಿಭಾಗದ ಡಿಸಿಪಿ ಡಾ||ಶರಣಪ್ಪ ಅವರು ಬಾಣಸವಾಡಿ ಎಸಿಪಿ ಎನ್.ಬಿ.ಸಕ್ರಿ ಅವರ ನೇತೃತ್ವದಲ್ಲಿ ಐದು ವಿಶೇಷ ತಂಡಗಳನ್ನು ರಚಿಸಿದ್ದರು. ಈ ತಂಡಗಳು ತಾಂತ್ರಿಕವಾಗಿ ಹಾಗೂ ವೈಜ್ಞಾನಿಕವಾಗಿ ತನಿಖೆ ಕೈಗೊಂಡು ಕೃತ್ಯ ನಡೆದ ಸ್ಥಳದಲ್ಲಿ ಲಭ್ಯವಾದ ಮಾಹಿತಿ ಹಾಗೂ ಸಿಸಿಟಿವಿಯಲ್ಲಿ ಲಭ್ಯವಾದ ದೃಶ್ಯಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಯುವಕನನ್ನು ರಕ್ಷಿಸಿ ದ್ದಾರೆ.
ಆರೋಪಿಗಳು ತುಂಬಾ ಸಾಲ ಮಾಡಿಕೊಂಡಿದ್ದು, ಅವರಲ್ಲಿ ಒಬ್ಬ ತನ್ನ ತಂಗಿಯ ಮದುವೆಗೆ ಮಾಡಿದ್ದ ಸಾಲವನ್ನು ತೀರಿಸುವುದಕ್ಕೋಸ್ಕರ ಅಪರಾಧದಲ್ಲಿ ಶಾಮೀಲಾಗಿದ್ದಾನೆ. ಅದರಂತೆ ರಬೀಜ್ ಅರಾಪತ್ ಅವರ ಬಗ್ಗೆ ಮಾಹಿತಿ ಸಂಗ್ರಹಿಸಿ ಅವರನ್ನು ಕಿಡ್ನಾಪ್ ಮಾಡಲು ಪ್ಲಾನ್ ಮಾಡಿದರು ಇದಕ್ಕಾಗಿ ಓಎಲ್ಕ್ಸ್ನಲ್ಲಿ ಮಾರುತಿ 800 ಕಾರನ್ನು ಖರೀದಿ ಮಾಡಿದ್ದಾರೆ. ನಂತರ ಯುವಕನನ್ನು ಅಪಹರಿಸಿ ಕಾರಿನಲ್ಲಿ ಕೂರಿಸಿಕೊಂಡು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅವಲಹಳ್ಳಿ, ಯರ್ರಪ್ಪನಹಳ್ಳಿ ಸುತ್ತಮುತ್ತ ಸುತ್ತಿಸಿದ್ದಾರೆ. ಪೋಷಕರಿಗೆ ಕರೆ ಮಾಡಿ 2 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.