ಕುಡಿದ ಮತ್ತಲ್ಲಿ ಪಾದಚಾರಿಗೆ ಕಾರ್ನಿಂದ ಡಿಕ್ಕಿ ಹೊಡೆದ PWD ಇಂಜಿನಿಯರ್, ವ್ಯಕ್ತಿ ಸ್ಥಳದಲ್ಲೇ ಸಾವು | Janata news
ಮಂಗಳೂರು : ಲೋಕೋಪಯೋಗಿ ವಿಭಾಗದ (ಪಿಡಬ್ಲ್ಯುಡಿ) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ)ಭಾನುವಾರ ರಾತ್ರಿ ಮಂಗಳೂರಿನ ಸರ್ಕ್ಯೂಟ್ ಹೌಸ್ ರಸ್ತೆಯ ಬಳಿ ಪಾದಚಾರಿಯೊಬ್ಬನಿಗೆ ಕಾರ್ ಡಿಕ್ಕಿ ಹೊಡೆಸಿದ್ದು ಪಾದಚಾರಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಮಂಗಳೂರು ಲೇಡಿಹಿಲ್ ಬಿಎಸ್ಎನ್ಎಲ್ ಸ್ಟಾಫ್ ಕ್ವಾಟ್ರಸ್ ನಿವಾಸಿ ಆನಂದ್(62) ಮೃತ ದುರ್ದೈವಿ. ಮೂಲತಃ ಚಿಕ್ಕಮಗಳೂರಿನ ಹಸಹಳ್ಳಿಪೇಟೆಯ ಗಾಳಿಪೇಟೆ ನಿವಾಸಿಯಾದ ಆನಂದ್, ಮಂಗಳೂರಿನ ಬಿಎಸ್ಎನ್ಎಲ್ ಕಚೇರಿಯ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದರು.
ಘಟನೆ ಹಿನ್ನೆಲೆ ಸಣ್ಣ ನೀರಾವರಿ ಇಲಾಖೆಯ ಅಂತರ್ಜಲ ವಿಭಾಗದ ಎಇಇ ಆಗಿರುವ ಆರೋಪಿ ಷಣ್ಮುಗಮ್ ಅವರನ್ನು ಬಂಧಿಸಲಾಗಿದೆ.
ಯಾವುದೋ ಕೆಲಸದ ಮೇರೆಗೆ ಉಡುಪಿಗೆ ತೆರಳಿದ್ದ ಆನಂದ್ ಭಾನುವಾರ ರಾತ್ರಿ ವಾಪಸ್ ಮಂಗಳೂರಿಗೆ ಬಸ್ನಲ್ಲಿ ಬಂದಿದ್ದರು. ಬಸ್ ಇಳಿ ನಡೆದುಕೊಂಡು ರಸ್ತೆಬದಿ ಹೋಗುತ್ತಿದ್ದರು. ಈ ವೇಳೆ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಷಣ್ಮುಗಂ ಕುಡಿದ ಮತ್ತಿನಲ್ಲಿ ಬೇಕಾಬಿಟ್ಟಿ ಕಾರು ಚಲಾಯಿಸಿಕೊಂಡು ಬಂದು ಆನಂದ್ಗೆ ಡಿಕ್ಕಿ ಹೊಡೆದಿದ್ದಾರೆ.
ಭಾನುವಾರ ರಾತ್ರಿ 9.53 ಕ್ಕೆ ಅಪಘಾತ ಸಂಭವಿಸಿದೆ. ಸಿಸಿಟಿವಿ ಕ್ಯಾಮೆರಾದಾದಲ್ಲಿ ದೃಶ್ಯ ಸೆರೆಯಾಗಿದ್ದು ಷಣ್ಮುಗಂ ಓಡಿಸಿದ ಕಾರು ಆನಂದ್ ಅವರಿಗೆ ಸಾಕಷ್ಟು ವೇಗದಲ್ಲಿ ಡಿಕ್ಕಿ ಹೊಡೆಯುವುದನ್ನು ಕಾಣಬಹುದು. ಅಪಘಾತದ ಕಾರಣದಿಂದ ಆನಂದ್ ಸ್ವಲ್ಪ ದೂಅಕ್ಕೆ ಎಗರಿ ಬಿದ್ದು ಅಲ್ಲೇ ಸಾವನ್ನಪ್ಪಿದ್ದಾರೆ.