ಕುಲಪತಿ ಹುದ್ದೆ ಕೊಡಿಸುವುದಾಗಿ 17.5 ಲಕ್ಷ ರೂ. ಪಡೆದುಕೊಂಡಿದ್ದ ರಾಮಸೇನೆ ಮುಖಂಡ ಅರೆಸ್ಟ್! | Janata news
ಮಂಗಳೂರು : ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಕೊಡಿಸುವುದಾಗಿ ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರಿಂದ 17.5 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ ಆರೋಪದ ಮೇಲೆ ರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ವಿವಿ ಕಾಲೇಜು ಅಭಿವೃದ್ಧಿ ಸಮಿತಿ ನಿರ್ದೇಶಕ ಡಾ. ಜೈಶಂಕರ್ ಅವರಿಗೆ ವಿವೇಕ್ ಆಚಾರ್ಯ ಅವರ ಮೂಲಕ ಪರಿಚಯವಾಗಿದ್ದ ಪ್ರಸಾದ್ ಅತ್ತಾವರ ಸಿಎಂ ಜೊತೆಗೆ ಬಾಂಧವ್ಯ ಹೊಂದಿರುವುದಾಗಿ ಹೇಳಿಕೊಂಡು 30 ಲಕ್ಷ ರೂಪಾಯಿ ನೀಡಿದರೆ ವಿವಿ ಕುಲಪತಿ ಹುದ್ದೆ ಕೊಡಿಸುವುದಾಗಿ ನಂಬಿಸಿದ್ದಾರೆ.
ಇದಕ್ಕಾಗಿ 30 ಲಕ್ಷ ರೂ. ಹಣ ಕೊಡಬೇಕೆಂದು ತಿಳಿಸಿ, ಒತ್ತಾಯವಾಗಿ 17.5 ಲಕ್ಷ ರೂ. ಹಣ ಪಡೆದು ಉಳಿದ ಹಣಕ್ಕೆ 3 ಖಾಲಿ ಚೆಕ್ ಪಡೆದು ವಂಚಿಸಿದ್ದಾನೆ.
ಮರಳಿ ಹಣ ಕೇಳಿದಾಗ ಹಣ ಕೊಡದೆ ಜೀವ ಬೆದರಿಕೆ ಹಾಕಿದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಂಕನಾಡಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ. ಈತನ ವಿರುದ್ಧ ಮಂಗಳೂರು ಉತ್ತರ ಠಾಣೆ, ಮಂಗಳೂರು ಪೂರ್ವ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದು, ಕಂಕನಾಡಿ ನಗರ ಠಾಣೆಯಲ್ಲಿ ರೌಡಿಶೀಟರ್ ಎಂದು ದಾಖಲಾಗಿದೆ.