ಸಚಿವ ಬಿಸಿ ಪಾಟೀಲ್ ಗೆ ಮನೆಯಲ್ಲಿ ಲಸಿಕೆ ನೀಡಿದ ಆರೋಗ್ಯಾಧಿಕಾರಿ ಅಮಾನತು | ಜನತಾ ನ್ಯೂಸ್
ಹಾವೇರಿ: : ಸಚಿವರಿಗೆ ಲಸಿಕೆ ನೀಡುವ ಸಲುವಾಗಿ ಬಿ ಸಿ ಪಾಟೀಲ್ ಅವರ ಮನೆಗೆ ಭೇಟಿ ನೀಡುವಂತೆ ತಮ್ಮ ಸಿಬ್ಬಂದಿಗಳಿಗೆ ಆದೇಶಿಸಿದ್ದ ಹಿರೇಕೆರೂರು ತಾಲೂಕು ಆರೋಗ್ಯ ಅಧಿಕಾರಿ ಡಾ. ಝಡ್. ಆರ್. ಮಕಂದರ್ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಮಾನತುಗೊಳಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಆಯುಕ್ತ ಕೆ.ವಿ. ತ್ರೀಲೋಕ ಚಂದ್ರ ಸೇವೆಯಿಂದ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಮನೆಯಲ್ಲಿಯೇ ಲಸಿಕೆ ಪಡೆದಿದ್ದಕ್ಕೆ ಸಚಿವ ಬಿ.ಸಿ. ಪಾಟೀಲ್ ವಿವಾದಕ್ಕೆ ಕಾರಣವಾಗಿದ್ದರು. ಮಾರ್ಚ್ 2 ರಂದು ಹಿರೇಕೆರೂರು ಮನೆಯಲ್ಲಿ ಸಚಿವ ಪಾಟೀಲ ಹಾಗೂ ಅವರ ಪತ್ನಿ ವನಜಾ ಪಾಟೀಲ ವ್ಯಾಕ್ಸಿನ್ ಹಾಕಿಸಿಕೊಂದಿದ್ದರು.
ಸರ್ಕಾರದ ನಿಯಮಗಳ ಪ್ರಕಾರ ವಯಸ್ಕರೇ ಆಗಲಿ ವೃದ್ದರೇ ಆಗಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಂಡು ನಿಯಮಾನುಸಾರ ನಿಗದಿತ ಆಸ್ಪತ್ರೆಗೆ ಹೋಗಿ ಲಸಿಕೆ ಹಾಕಿಸಿಕೊಳ್ಳಬೇಕು. ಆದರೆ ಸಚಿವರಿಗೆ ಲಸಿಕೆ ಹಾಕುವ ವಿಚಾರದಲ್ಲಿ ಹಿರೇಕೆರೂರು ಆರೋಗ್ಯ ಅಧಿಕಾರಿಗಳೇ ನಿಯಮಗಳನ್ನು ಮೀರಿ ನಡೆದುಕೊಳ್ಳುವ ಮೂಲಕ ಜನಸಾಮಾನ್ಯರಿಗೊಂದು ನಿಯಮ ಜನಪ್ರತಿನಿಧಿಗಳಿಗೊಂದು ನಿಯಮವೇ? ಎನ್ನುವ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದವು.
ಸಚಿವರ ಮನೆಗೆ ತೆರಳಿ ಲಸಿಕೆ ನೀಡಿದ್ದ ಸಂಬಂಧ ಡಾ. ಮಕಾಂದಾರ್ ಅವರಿಗೆ ಕಾರಣ ಕೇಳಿ ಡಾ.ರಾಜೇಂದ್ರ ದೊಡ್ಡಮನಿ ಅವರು ಮಾರ್ಚ್ 2 ರಂದು ನೋಟಿಸ್ ಜಾರಿ ಮಾಡಿದ್ದರು. ಸಚಿವರು ತಾಲೂಕಿನ ಪ್ರಥಮ ಪ್ರಜೆಯಾಗಿದ್ದಾರೆ. ಅವರಿಗೆ ಬೈಲ್ಯಾಟರಲ್ ನೀ ಆಸ್ಟಿಯೋ ಆಥ್ರ್ರಿಟಿಸ್ ಹಾಗೂ ಕ್ರಾನಿಕ್ ಲೋಬ್ಯಾಕ್ ಎಖ್ಆರೋಗ್ಯ ಸಮಸ್ಯೆ ಇರುವುದರಿಂದ ಸಚಿವರ ಕರೆಯ ಮೇರೆಗೆ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಅವಶ್ಯಕ ತುರ್ತು ಸೇವೆ ಅಂಬುಲೆನ್ಸ್ ಹಾಗೂ ಔಷಧಗಳೊಂದಿಗೆ ಸಚಿವರಿಗೆ ಕೋವಿಡ್-19 ಲಸಿಕೆಯನ್ನು ನೀಡಿ ನಂತರ 30 ನಿಮಿಷಗಳವರೆಗೆ ನಿಗಾವಹಿಸಲಾಗಿತ್ತು. ಇನ್ನು ಮುಂದೆ ಕೋವಿಡ್-19 ಮಾರ್ಗಸೂಚಿ ಪ್ರಕಾರ ಸಾರ್ವಜನಿಕರಿಗೆ ಲಸಿಕೆ ನೀಡುತ್ತೇವೆ ಎಂದು ಉತ್ತರ ನೀಡಿದ್ದರು.
ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿದ ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು ಡಾ.ಮಕಂದರ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.