ಅವರ ಮಧ್ಯೆ ಬೆಂಕಿ ಇರುವಾಗ ನಮ್ಮಲ್ಲಿ ಸಣ್ಣ ಹೊಗೆ ಬರೋದು ಸಹಜವಾಗಿದ್ದು: ನಳೀನ್ ಕುಮಾರ್ ಕಟೀಲ್ | ಜನತಾ ನ್ಯೂಸ್
ಮಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಧ್ಯದಲ್ಲಿ ದೊಡ್ಡದಾಗಿ ಬೆಂಕಿ ಉರಿಯುತ್ತಿರುವಾಗ, ನಮ್ಮಲ್ಲಿ ಸ್ವಲ್ಪ ಹೊಗೆ ಬರುವುದು ಸಹಜ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಹೇಳಿದರು.
ಸಚಿವ ಈಶ್ವರಪ್ಪರಿಂದ ರಾಜ್ಯಪಾಲರಿಗೆ ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಮಾತನಾಡಿದ ಅವರು, ಹಿರಿಯ ನಾಯಕರು ಅವರು, ಹಾಗಾಗಿ ಕುಳಿತು ಚರ್ಚೆ ಮಾಡಬಹುದಿತ್ತು. ನನಗೂ ಪತ್ರ ಬರೆದಿದ್ದಾರೆ, ಅದೇ ಪತ್ರವನ್ನು ಅಲ್ಲಿಗೂ ಕೊಟ್ಡಿದ್ದಾರೆ. ನಮ್ಮ ಮೇಲೆ ವಿಶ್ವಾಸವಿದ್ದೇ ಅವರು ಪತ್ರ ಬರೆದಿದ್ದಾರೆ ಎಂದರು.
ಇನ್ನು ಇದು ಯಾವುದೇ ಗೊಂದಲ ಇಲ್ಲದೇ ಸುಖಾಂತ್ಯವಾಗುತ್ತದೆ. ಈಶ್ವರಪ್ಪನವರ ಪತ್ರದ ಬಳಿಕ ಈ ಬಗ್ಗೆ ಅವರ ಜೊತೆ ಚರ್ಚೆ ಮಾಡಿದ್ದೇನೆ. ಅವರು ಪದೇ ಪದೇ ಈ ಬಗ್ಗೆ ಮಾತನಾಡ್ತಿಲ್ಲ, ಈ ಬಾರಿ ಪತ್ರ ಬರೆದಿದ್ದಾರೆ. ಯತ್ನಾಳ್ ಮತ್ತು ಈಶ್ವರಪ್ಪನವರ ವಿಚಾರ ವಿಭಿನ್ನವಾಗಿದೆ. ಈಶ್ವರಪ್ಪನವರು ಸಚಿವರು, ಯತ್ನಾಳ್ ಶಾಸಕರಾಗಿದ್ದು ಅವರಿಗೆ ನೊಟೀಸ್ ಕೊಡಲಾಗಿದೆ ಎಂದಿದ್ದಾರೆ.
ಕಾಂಗ್ರೆಸ್ನಲ್ಲಿ ನಾಯಕರ ಜಗಳ ಬೀದಿಗೆ ಬಿದ್ದಿದೆ. ಉಪ ಚುನಾವಣೆ ಸಂದರ್ಭದಲ್ಲಿ ಅವರ ನಡುವಿನ ಗೊಂದಲಗಳು ಮಿತಿಮೀರಿದೆ. ಸಿದ್ದರಾಮಯ್ಯ ಅವರು ನಾನೇ ಮುಖ್ಯಮಂತ್ರಿ ಎಂದು ಟ್ವೀಟ್ನಲ್ಲೇ ಹೇಳಿದ್ದಾರೆ. ಅದನ್ನು ಶಿವಕುಮಾರ್ ವಿರೋಧಿಸಿದ್ದಾರೆ. ಅದರ ಎದುರು ನಮ್ಮ ಗೊಂದಲ ದೊಡ್ಡದಲ್ಲ ಎಂದು ಪ್ರತಿಕ್ರಿಯಿಸಿದರು.
ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಸಂಘರ್ಷ ಜೋರಿದೆ. ಅವರಿಬ್ಬರ ಜಗಳ ಈಗಾಗಲೇ ಬೀದಿಗೆ ಬಿದ್ದಿದೆ. ಸಿದ್ದರಾಮಯ್ಯ ನಾನೇ ಸಿಎಂ ಅಂತ ಹೇಳಿದ್ರೆ, ಡಿಕೆಶಿ ಅದನ್ನ ವಿರೋಧಿಸಿದ್ದಾರೆ. ಅವರ ಮಧ್ಯೆ ಬೆಂಕಿ ಇರುವಾಗ ನಮ್ಮಲ್ಲಿ ಸಣ್ಣ ಹೊಗೆ ಬರೋದು ಸಹಜವಾಗಿದ್ದು, ಸಿಡಿ ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಯಾರ ಹೆಸರನ್ನೂ ಉಲ್ಲೇಖಿಸಲ್ಲ ಎಂದು ನಳೀನ್ ಕುಮಾರ್ ಕಟೀಲ್ ಅವರು ಮಾತನಾಡಿದ್ದಾರೆ.