ಎಸ್ಐಟಿ ವಿರುದ್ಧ ಸಿಡಿದೆದ್ದ ಸಿಡಿ ಲೇಡಿ, ಸಾಕ್ಷ್ಯಗಳ ನಾಶ: ಆಯುಕ್ತರಿಗೆ ಸಿಡಿ ಲೇಡಿ ಪತ್ರ! | ಜನತಾ ನ್ಯೂಸ್
ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿಲ್ಲ, ಪ್ರತಿ ದಿನ ವಿಚಾರಣೆ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಸಿಡಿ ಲೇಡಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಬರೆದಿರುವ ಪತ್ರ ಸಾಕಷ್ಟು ಸಂಚಲನ ಉಂಟುಮಾಡಿದೆ.
ಆರೋಪಿಯನ್ನ ಬಿಟ್ಟು ನನ್ನನ್ನ ನಿರಂತರ ವಿಚಾರಣೆ ಮಾಡುತ್ತಿದ್ದಾರೆ. ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡಲಾಗುತ್ತಿದೆ. ವಿಚಾರಣೆ ನೆಪದಲ್ಲಿ ನನಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರಿಗೆ ಸಿಡಿ ಲೇಡಿ ದೂರಿನ ಪತ್ರ ಕಳಿಸಿದ್ದಾಳೆ ಎನ್ನಲಾಗಿದೆ.
ನಾನು ನೀಡಿದ ಅತ್ಯಾಚಾರ ಪ್ರಕರಣ ದೂರಿನ ಪ್ರಕರಣದಲ್ಲಿ ಆರೋಪಿಯನ್ನ ರಕ್ಷಿಸುವ ಸಲುವಾಗಿ ನನ್ನ ವಿರುದ್ಧ ಷಡ್ಯಂತರ ಮಾಡಿ ತನಿಖಾಧಿಕಾರಿಗಳ ಮೇಲೆ ರಾಜಕೀಯ ಪ್ರಭಾವ ಬೀರಲಾಗುತ್ತಿದೆ ಎಂದು ಆರೋಪಿಸಿರುವ ಸಿಡಿ ಲೇಡಿ, ರಮೇಶ್ ನೀಡಿರೋ ದೂರಿನಲ್ಲಿ ನನ್ನ ಹೆಸರಿಲ್ಲ. ನಾನು ಕೊಟ್ಟಿರುವ ದೂರಿನಲ್ಲಿ ರಮೇಶ್ ಹೆರಸನ್ನ ನೇರವಾಗಿಯೇ ಪ್ರಸ್ತಾಪಿಸಿದ್ದೇನೆ. ಆದರೂ ಅವರ ವಿಚಾರಣೆ ನಡೆಯುತ್ತಿಲ್ಲ.
ನನ್ನನ್ನು ಆರೋಪಿ ಸ್ಥಾನದಲ್ಲಿ ಇರಿಸಲು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದಾರೆ. ನನ್ನ ಚಾರಿತ್ರ್ಯವಧೆ ಮಾಡುವಂತಹ ಪ್ರಯತ್ನವನ್ನು ರಮೇಶ್ ಜಾರಕಿಹೊಳಿ ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ಸಿಡಿಲೇಡಿ ಬರೆದಿದ್ದಾರೆ ಎನ್ನಲಾಗಿದೆ.
ಮಹಜರು ವೇಳೆಯಲ್ಲಿ ಆರ್ ಟಿ ನಗರದಲ್ಲಿನ ಪಿಜಿಯಲ್ಲಿ ಸಾಕ್ಷ್ಯ ನಾಶಪಡಿಸಲಾಗಿದೆ. ನನ್ನ ಒಪ್ಪಿಗೆ ಇಲ್ಲದಿದ್ದರೂ ಸರ್ಕಾರಿ ವಿಶೇಷ ಅಭಿಯೋಜಕರನ್ನು ನೇಮಕ ಮಾಡಲಾಗಿದೆ. ರಮೇಶ್ ಜಾರಕಿಹೊಳಿ ಆರೋಪ ಮುಕ್ತರಾಗಿ ಬರಲಿದ್ದಾರೆ ಎಂಬ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹೇಳಿಕೆ ಕೂಡಾ ನನಗೆ ಆಘಾತವನ್ನುಂಟು ಮಾಡಿದೆ.
ದಯವಿಟ್ಟು ನೀವು ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ಮಾಡಿ ನನಗೆ ನ್ಯಾಯ ಕೊಡಿಸಬೇಕು ಎಂದು ಯುವತಿ ಪತ್ರದ ಮೂಲಕ ಮನವಿ ಮಾಡಿದ್ದಾಳೆ ಎನ್ನಲಾಗಿದೆ.