ಸಿ.ಡಿ ಪ್ರಕರಣದ ಯುವತಿಗೆ ಯಾವುದೇ ಹಣ ವರ್ಗಾವಣೆ ಮಾಡಿಲ್ಲ: ಮಾಜಿ ಸಚಿವ ಡಿ ಸುಧಾಕರ್ ಸ್ಪಷ್ಟಣೆ | ಜನತಾ ನ್ಯೂಸ್
ಬೆಂಗಳೂರು : ರಮೇಶ್ ಜಾರಕಿಹೊಳಿಯವರಿಗೆ ಸೇರಿದೆಯೆನ್ನಲಾದ ಅಶ್ಲೀಲ ಸಿ.ಡಿ ಪ್ರಕರಣಗಳ ರಾದ್ಧಾಂತ ಇನ್ನೂ ತಣ್ಣಗಾಗುವ ಹೊತ್ತಿಗೆ ಕಾಂಗ್ರೆಸ್ ನ ಇನ್ನೊರ್ವ ಮುಖಂಡನ ಹೆಸರು ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ಈ ಪ್ರಕರಣ ಸಂಬಂಧ ಮಾಜಿ ಸಚಿವ ಡಿ ಸುಧಾಕರ್ ಅವರಿಗೆ ನೋಟೀಸ್ ನೀಡಿದೆ. ಈ ಪ್ರಕರಣದ ಸಂತ್ರಸ್ತ ಯುವತಿಗೆ ಡಿ ಸುಧಾಕರ್ ಅವರು ಹಣ ಟ್ರಾನ್ಸ್ಫರ್ ಮಾಡಿರುವ ಮಾಹಿತಿ ತನಿಖಾಧಿಕಾರಿಗಳಿಗೆ ಸಿಕ್ಕಿದೆ. ಅದಕ್ಕಾಗಿ ಬ್ಯಾಂಕ್ ಅಕೌಂಟ್ ವಿವರಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಗಳು ಡಿ ಸುಧಾಕರ್ ಅವರಿಗೆ ನೀಡಿರುವ ನೋಟೀಸ್ನಲ್ಲಿ ಸೂಚಿಸಿದ್ದಾರೆನ್ನಲಾಗಿದೆ.
ಯುವತಿಗೆ ಇವರಿಂದ ಅತಿ ಹೆಚ್ಚು ಮೊಬೈಲ್ ಕರೆಗಳು ಹೋಗಿವೆ. ಯುವತಿಯಿಂದ ಸುಧಾಕರ್ಗೆ 30ಕ್ಕೂ ಹೆಚ್ಚು ಬಾರಿ ಕರೆಗಳು ಹೋಗಿವೆ. ಆರ್ಟಿ ನಗರದಲ್ಲಿರುವ ಯುವತಿಯ ಬ್ಯಾಂಕ್ ಖಾತೆಗೆ ಡಿ ಸುಧಾಕರ್ ಅವರ ಅಕೌಂಟ್ನಿಂದ ಹಣ ವರ್ಗಾವಣೆ ಆಗಿರುವ ಮಾಹಿತಿ ತನಿಖಾಧಿಕಾರಿಗಳಿಗೆ ಲಭಿಸಿರುವ ಹಿನ್ನೆಲೆಯಲ್ಲಿ ನೋಟೀಸ್ ಕೊಟ್ಟಿದ್ದಾರೆ. ಬುಧವಾರದ ಒಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಪ್ರತಿದಿನ ಸಾವಿರಾರು ದೂರವಾಣಿ ಕರೆ ಬರುತ್ತೆ. ಅದ್ರಲ್ಲಿ ಯಾರ್ ಜೊತೆ ಮಾತಾಡಿರ್ತೀನಿ, ಯಾರ್ ಜೊತೆ ಮಾತಾಡಿರಲ್ಲ ಅಂತ ಗೊತ್ತಿರಲ್ಲ. ಆಕೆ ಜೊತೆ ಮಾತಾಡಿರಬಹುದು ಅಥವಾ ಮಾತಾಡದೇ ಇರಬಹುದು. ಆದ್ರೆ ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನ್ ಯಾರಿಗೂ ದುಡ್ಡು ಕೊಟ್ಟಿಲ್ಲ. ನನ್ನನ್ನ ಯಾರೂ ಹನಿಟ್ರ್ಯಾಪ್ ಮಾಡಿಲ್ಲ. ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಕರೆದ್ರೆ ಹಾಜರಾಗ್ತೀನಿ ಅಂತ ಹೇಳಿದ್ದಾರೆ.
ನನಗೆ ಭಯ ಇದ್ದಿದ್ದರೆ ಮೊದಲೇ ನ್ಯಾಯಾಲಯದ ಮೊರೆ ಹೊಗುತ್ತಿದ್ದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕಾರಣಕ್ಕೆ ಇಂತಹ ಪ್ರಕರಣದಲ್ಲಿ ಸಿಲುಕಿಸುವುದು ತಪ್ಪು ಎಂದು ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.