ಯಡಿಯೂರಪ್ಪ ಪಕ್ಷದ ನಾಯಕರೇ ಹೊರತು ಮಾಲೀಕರಲ್ಲ, ಬಿಜೆಪಿಯಲ್ಲಿ ವಂಶಾಡಳಿತವಿಲ್ಲ: ಸಿ.ಟಿ.ರವಿ | ಜನತಾ ನ್ಯೂಸ್
ಬೆಂಗಳೂರು : ಸಿಎಂ ಯಡಿಯೂರಪ್ಪ ಬಿಜೆಪಿಯ ಮಾಲಕರಲ್ಲ. ಅವರು ನಮ್ಮ ಪಕ್ಷದ ನಾಯಕರು. ಬಿಜೆಪಿಗೆ ಕಾರ್ಯಕರ್ತರೇ ಮಾಲಕರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಮಾಲೀಕರು ಅಂದರೆ ನೆಹರು ಕುಟುಂಬ. ಜೆಡಿಎಸ್ಗೆ ಮಾಲೀಕರು ಅಂದರೆ ಎಚ್.ಡಿ.ದೇವೇಗೌಡರ ಕುಟುಂಬ. ಆದರೆ ನಮ್ಮಲ್ಲಿ ಅಂತಹ ಪ್ರವೃತ್ತಿ ಇಲ್ಲ, ಕಾರ್ಯಕರ್ತರೇ ಮಾಲೀಕರು ಎಂದರು.
ಯಡಿಯೂರಪ್ಪ ನಮ್ಮಸರ್ವೋಚ್ಚ ನಾಯಕರೇ ಹೊರತು ಮಾಲೀಕರಲ್ಲ, ನಮ್ಮ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಯಕ, ಅಮಿತ್ ಶಾ ನಾಯಕ, ಯಡಿಯೂರಪ್ಪ ನಾಯಕ ಆದರೆ ಕಾರ್ಯಕರ್ತರೇ ಮಾಲೀಕರು. ಓನರ್ ಶಿಪ್ ಬೇರೆ, ನಾಯಕರ ಮಕ್ಕಳು ರಾಜಕೀಯಕ್ಕೆ ಬರುವುದು ಬೇರೆ.
ಇತರ ಪಕ್ಷದಲ್ಲಿ ಅಂತಿಮ ನಿರ್ಧಾರ ಯಾವುದೋ ಒಬ್ಬ ನಾಯಕನ ಕುಟುಂಬ ತೆಗೆದುಕೊಳ್ಳಲಿದೆ. ಆದರೆ ನಮ್ಮ ಪಕ್ಷದಲ್ಲಿ ಕೋರ್ಕಮಿಟಿ, ಸಂಸದೀಯ ಮಂಡಳಿ ತೆಗೆದುಕೊಳ್ಳಲಿದೆ. ನಮ್ಮ ಪಕ್ಷ ಎಲ್ಲರಿಗೂ ಯೋಗ್ಯತೆ ಹಾಗೂ ಪರಿಶ್ರಮದಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ಅವಕಾಶ ಕೊಡಲಿದೆ. ಆದರೆ ಉತ್ತರಾಧಿಕಾರಿ ಸಂಸ್ಕೃತಿಗೆ ಅವಕಾಶ ಇಲ್ಲ. ಹಿಂದೆಯೂ ಇರಲಿಲ್ಲ ಈಗಲೂ ಇಲ್ಲ, ನಮ್ಮದು ಕೇಡರ್ ಬೇಸ್ಡ್ ಡಿಎನ್ ಎ ಎಂದರು.