ಪಂಜಾಬ್ ನಿಂದ ಮುಖ್ತಾರ್ ಅನ್ಸಾರಿ ವರ್ಗಾವಣೆ : ಭಾರಿ ಭದ್ರತೆಯೊಂದಿಗೆ ಕರದೊಯ್ಯುತ್ತಿರುವ ಯುಪಿ ಪೊಲೀಸರು | ಜನತಾ ನ್ಯೂಸ್
ಚಂಡೀಗಡ : ಭೂಗತಪಾತಕಿ ಹಾಗೂ ಬಹುಜನ ಸಮಾಜವಾದಿ ಪಾರ್ಟಿ(ಬಿಎಸ್ಪಿ) ಶಾಸಕ ಮುಖ್ತಾರ್ ಅನ್ಸಾರಿ ಅವರನ್ನು ಪಂಜಾಬ್ ಜೈಲಿನಿಂದ ಉತ್ತರ ಪ್ರದೇಶ(ಯುಪಿ)ದ ಬಂಡಾ ಜೈಲಿಗೆ ಭಾರಿ ಪ್ರಮಾಣದ ಭದ್ರತೆಯ ನಡುವೆ ಇಂದು ಮಂಗಳವಾರ ಸ್ಥಳಾಂತರಿಸಲಾಗುತ್ತಿದೆ.
ಅಂದಾಜು 100ಕ್ಕೂ ಅಧಿಕ ಯುಪಿ ಪೋಲಿಸ್ ಸಿಬ್ಬಂದಿಗಳ ಭದ್ರತೆಯಲ್ಲಿ ಅನ್ಸಾರಿ ಯನ್ನು ರಸ್ತೆ ಮಾರ್ಗವಾಗಿ 800 ಕಿ.ಮಿ. ದೂರವಿರುವ ಬಂಡಾ ಜೈಲಿಗೆ ಸಾಗಿಸಲಾಗುತ್ತಿದ್ದು, ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಅನ್ಸಾರಿಯನ್ನು ಉತ್ತರ ಪ್ರದೇಶಕ್ಕೆ ಕಸ್ಟಡಿಗೆ ನೀಡುವಂತೆ ಸುಪ್ರೀಂ ಕೋರ್ಟ್ ಪಂಜಾಬ್ ಸರ್ಕಾರಕ್ಕೆ ನಿರ್ದೇಶಿಸಿದ ನಂತರ ಈ ವರ್ಗಾವಣೆ ಮಾಡಲಾಗಿದೆ. ಸುದ್ದಿ ವರದಿಗಳ ಪ್ರಕಾರ, ರಾಜಕಾರಣಿ ಯುಪಿ ಯಲ್ಲಿ ಕೊಲೆ, ದರೋಡೆ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿದ್ದಾನೆ.
ವೈದ್ಯಕೀಯ ಕಾರಣಗಳನ್ನು ಉಲ್ಲೇಖಿಸಿ ಪಂಜಾಬ್ ಅವರನ್ನು ವರ್ಗಾವಣೆ ಮಾಡಲು ನಿರಾಕರಿಸಿದ ನಂತರ ಯುಪಿ ರಾಜ್ಯವು ಅನ್ಸಾರಿ ಕಸ್ಟಡಿಗೆ ಸರ್ವೋಚ್ಚ ನ್ಯಾಯಾಲಯವನ್ನು ಸಂಪರ್ಕಿಸಿತ್ತು. ಏತನ್ಮಧ್ಯೆ, ಶಾಸಕರ ಪತ್ನಿ ಭದ್ರತೆ ಮತ್ತು ಪತಿಗೆ ನ್ಯಾಯಯುತ ವಿಚಾರಣೆ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.