ಪಶ್ಚಿಮ ಬಂಗಾಳ : ಮತಗಟ್ಟೆಯಲ್ಲಿ ಹಿಂಸಾಚಾರ ಗುಂಡಿನ ದಾಳಿಗೆ 5 ಸಾವು | ಜನತಾ ನ್ಯೂಸ್
ಕೊಲ್ಕೊತ್ತಾ : ಪಶ್ಚಿಮ ಬಂಗಾಳದ 44 ವಿಧಾನಸಭಾ ಸ್ಥಾನಗಳಿಗೆ ಶನಿವಾರ ನಡೆದ ನಾಲ್ಕನೇ ಹಂತದ ಮತದಾನದ ವೇಳೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಸೇರಿದಂತೆ, ಒಟ್ಟು ಐದು ಜನರು ಸಾವನ್ನಪ್ಪಿದ್ದಾರೆ.
ಮತದಾನ ನಡೆಯುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಸೀತಾಲ್ಕುಚಿಯ ಮತಗಟ್ಟೆ ಸಂಖ್ಯೆ 126ರಲ್ಲಿ ಮತದಾನದ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವಂತೆ ಚುನಾವಣಾ ಆಯೋಗ ಆದೇಶಿಸಿದೆ.
ಚುನಾವಣೆ ಮತದಾನ ನಡೆಯುತ್ತಿರುವ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ಶನಿವಾರ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ. ಈವರೆಗೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಭಾರತದ ಚುನಾವಣಾ ಆಯೋಗ(ಇಸಿಐ) ವರದಿ ಕೋರಿದೆ.
ಕೇಂದ್ರ ಪಡೆಗಳ ಮೇಲೆ ಹಲ್ಲೆ ನಡೆಸಲಾಗಿದ್ದು, ಪ್ರತೀಕಾರವಾಗಿ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಾಲ್ಕನೇ ಹಂತದಲ್ಲಿ ಮತದಾನ ಪ್ರಾರಂಭವಾದ ಒಂದು ಗಂಟೆಯೊಳಗೆ ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರ ನಡುವೆ ಬೂತ್ ಸಂಖ್ಯೆ 285 ರಲ್ಲಿ ಉಣ್ಬವಿಸಿದ ಘರ್ಷಣೆಯ ಬೆನ್ನಲ್ಲೇ ಗೋಲಿಬಾರ್ ನಡೆದಿದೆ. ಜಿಲ್ಲೆಯ ಇತರ ಭಾಗಗಳಿಂದಲೂ ಕೆಲವು ಭಾಗಗಳಲ್ಲಿ ಹಿಂಸಾಚಾರದ ಘಟನೆಗಳು ನಡೆಯಲಾರಂಭಿಸಿವೆ.
ಕೂಚ್ ಬೆಹಾರ್ನ ಮತದಾನ ಕೇಂದ್ರದ ಹೊರಗೆ ಹಾರಿಸಲ್ಪಟ್ಟ ಗುಂಡಿನಿಂದ ಮೃತಪಟ್ಟವರಲ್ಲಿ, ಮೊದಲ ಬಾರಿಯ ಮತದಾರನೂ ಇದ್ದನು. ಮೃತರನ್ನು ಆನಂದ ಬರ್ಮನ್ ಎಂದು ಗುರುತಿಸಲಾಗಿದೆ. ಮೃತ ಯುವಕನಿಗೆ 18 ವರ್ಷ ವಯಸ್ಸಾಗಿತ್ತು ಮತ್ತು ಮೊದಲ ಬಾರಿಗೆ ಮತ ಚಲಾಯಿಸಲು ಬಂದಿದ್ದಾನೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಬರ್ಮನ್ ತಮ್ಮ ಪಕ್ಷದ ಬೆಂಬಲಿಗ ಎಂದು ಹೇಳಿಕೊಂಡರೆ, ತೃಣಮೂಲ ಕಾಂಗ್ರೆಸ್(ಟಿಎಂಸಿ) ಆತನ ಮೇಲೆ ಬಿಜೆಪಿ ಗುಂಡು ಹಾರಿಸಿದೆ ಎಂದು ಹೇಳಿಕೊಂಡಿದೆ.
ಇಂದು ಮತದಾನ ಕಾಣುತ್ತಿರುವ ಪಶ್ಚಿಮ ಬಂಗಾಳದ ಐದು ಜಿಲ್ಲೆಗಳ 44 ಕ್ಷೇತ್ರಗಳಲ್ಲಿ ಬೆಳಿಗ್ಗೆ 9.45 ರವರೆಗೆ 15.85% ರಷ್ಟು ಮತದಾನ ದಾಖಲಾಗಿದೆ, ಎಂದು ಭಾರತದ ಚುನಾವಣಾ ಆಯೋಗ(ಇಸಿಐ) ತಿಳಿಸಿದೆ.