ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಲೀನ್ ಬೌಲ್ಡ್ ಆಗಿದ್ದಾರೆ, ಬಿಜೆಪಿ ಶತಕ ಬಾರಿಸಿದೆ - ಪ್ರಧಾನಿ ಮೋದಿ | ಜನತಾ ನ್ಯೂಸ್
ಕೊಲ್ಕೊತ್ತಾ : ಬಂಗಾಳದ ಚುನಾವಣಾ ರ್ಯಾಲಿಯಲ್ಲಿ ಕ್ರಿಕೆಟ್ ಪದಗಳನ್ನು ಬಳಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿಧಾನಸಭಾ ಚುನಾವಣೆಯ ಮೊದಲ ನಾಲ್ಕು ಹಂತಗಳಲ್ಲಿ ಬಂಗಾಳದ ಜನರು ಎಷ್ಟೊಂದು ಬೌಂಡರಿ ಮತ್ತು ಸಿಕ್ಸರ್ಗಳನ್ನು ಹೊಡೆದಿದ್ದಾರೆ ಎಂದರೆ ಬಿಜೆಪಿ ಈಗಾಗಲೇ ಶತಕ ಬಾರಿಸಿದೆ ಎಂದರು, ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಲ್ಯಾಣಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು.
ವಿಧಾನಸಭಾ ಚುನಾವಣೆಯ ಮೊದಲ 4 ಹಂತಗಳಲ್ಲಿ ಬಿಜೆಪಿ ಈಗಾಗಲೇ ಒಂದು ಶತಕ ಪೂರೈಸಿದೆ. ಅರ್ಧದಷ್ಟು ಪಂದ್ಯಗಳಲ್ಲಿ(ಆಧಾ ಮೇ ಪೂರಾ ಸಾಫ್) ಟಿಎಂಸಿಯನ್ನು ಅಳಿಸಿ ಹಾಕಿದ್ದಾರೆ, ಎಂದರು.
ತಮ್ಮ ಪಕ್ಷದ ಪ್ರತಿಸ್ಪರ್ಧಿ ಟಿಎಂಸಿ ವಿರುದ್ಧ ವಾಗ್ದಾಳಿ ಮುಂದುವರೆಸಿದ ಪ್ರಧಾನಿ ಮೋದಿ, ಚುನಾವಣಾ ಸೋಲಿನ ಭಯದಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಸಭ್ಯತೆಯ ಗೆರೆ ದಾಟಿದ್ದಾರೆ, ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬರ್ಧಾಮನ್ ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಬಂಗಾಳದಲ್ಲಿ ಟಿಎಂಸಿಗೆ ತೀವ್ರ ಹಿನ್ನಡೆಯಾಗುತ್ತಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಲೀನ್ ಬೌಲ್ಡ್ ಆಗಿದ್ದಾರೆ. ಇದೇ ಆಕ್ರೋಶದಲ್ಲಿ ರಾಜ್ಯದಲ್ಲಿ ಚುನಾವಣಾ ಕರ್ತವ್ಯದಲ್ಲಿರುವ ಕೇಂದ್ರ ಪಡೆಗಳ ವಿರುದ್ಧ ಜನರನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿದರು. ಏಪ್ರಿಲ್ 10 ರಂದು ಕೂಚ್ ಬೆಹಾರ್ನಲ್ಲಿ ಸಿಐಎಸ್ಎಫ್ ಸಿಬ್ಬಂದಿಗಳ ಮೇಲೆ ನಡೆದ ಗುಂಪಿನ ದಾಳಿಗೆ ಪ್ರತಿಯಾಗಿ ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದರು.
ಬಂಗಾಳದ ಜನರು ನಂದಿಗ್ರಾಮ್ನಲ್ಲಿ ದೀದಿಯನ್ನು ಕ್ಲೀನ್ ಬೌಲ್ ಮಾಡಿದ್ದಾರೆ, ಎಂದಿರುವ ಪ್ರಧಾನಿ ಮೋದಿ, ದೀದಿ-ಓ-ದೀದಿ(ಮಮತಾ ಬ್ಯಾನರ್ಜಿ) ನಂದಿಗ್ರಾಮ್ದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕ್ಲೀನ್ ಬೋಲ್ಡ್ ಆಗಲಿರುವುದು ಯಾರು, ಎಂದು ಪ್ರಶ್ನಿಸಿದ್ದಾರೆ ಅಲ್ಲದೇ, ಮೇ.02ರ ಚುನಾವಣಾ ಫಲಿತಾಂಶದ ಬಳಿಕ ಮಮತಾ ಬ್ಯಾನರ್ಜಿ ಮತ್ತು ಅವರ ತಂಡ ರಾಜ್ಯದಿಂದ ಗಂಟು ಮೂಟೆ ಕಟ್ಟಲಿದೆ, ಎಂದು ಲೇವಡಿ ಮಾಡಿದ್ದಾರೆ.
ಚುನಾವಣೆಯಲ್ಲಿ ಸೋಲು ಖಚಿತ ಎಂದರಿತಿರುವ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ನಾಯಕರು, ಹಿಂದುಳಿದ ವರ್ಗಗಳನ್ನು ದೂಷಿಸುತ್ತಿದ್ದಾರೆ. ಹಿಂದುಳಿದ ವರ್ಗಗಳ ಜನರಿಗೆ ಅವಮಾನಿಸುತ್ತಿರುವ ಮಮತಾ ಮತ್ತು ಟಿಎಂಸಿ ಪಕ್ಷಕ್ಕೆ ಬಂಗಾಳದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮೋದಿ ಕಿಡಿಕಾರಿದರು.
ಇದೇ ವೇಳೆ, ಪರಿಶಿಷ್ಟ ಜಾತಿಯವರು ಭಿಕ್ಷುಕರು ಎಂದು ದೀದಿಗೆ ತುಂಬಾ ಹತ್ತಿರವಿರುವ ನಾಯಕರೊಬ್ಬರು ಕರೆದಿದ್ದರೂ ಅದಕ್ಕೆ ವಿಷಾದ ವ್ಯಕ್ತಪಡಿಸಲು ಯೋಚಿಸುತ್ತಿಲ್ಲ, ಎಂದು ಅಕ್ರೋಶ ವ್ಯಕ್ತಪಡಿಸಿದರು.