ತಿಂಗಳಿಗೆ 100 ಕೋಟಿ ಲಂಚ ಪ್ರಕರಣ : ಅನಿಲ್ ದೇಶಮುಖ್ ಮನೆ ಮೇಲೆ ಸಿಬಿಐ ದಾಳಿ, ಎಫ್ಐಆರ್ ದಾಖಲು | ಜನತಾ ನ್ಯೂಸ್
ಮುಂಬೈ : ತಮ್ಮ ವಿರುದ್ಧದ ಸುಲಿಗೆ ಆರೋಪಗಳ ಕುರಿತು ಪ್ರಾಥಮಿಕ ತನಿಖೆ ಆರಂಭಿಸುವಂತೆ ಸಿಬಿಐಗೆ ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿದ ಬೆನ್ನಲ್ಲೇ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರು ಇಂದು ಕೇಂದ್ರ ತನಿಖಾ ದಳ(ಸಿಬಿಐ)ದ ತನಿಖೆಯ ಬಿಸಿಯನ್ನು ಅನುಭವಿಸಿದ್ದಾರೆ.
ಅಪರಾಧ ಗುಪ್ತಚರ ಘಟಕದ ಸಹಾಯದಿಂದ ಮುಂಬೈನಾದ್ಯಂತ ಬಾರ್ ಮತ್ತು ರೆಸ್ಟೋರೆಂಟ್ಗಳಿಂದ ಹಣವನ್ನು ಸುಲಿಗೆ ಮಾಡಿದ ಆರೋಪದ ಮೇಲೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.
ಮುಂಬೈ ಅಪರಾಧ ಗುಪ್ತಚರ ಘಟಕದ ಮುಖ್ಯಸ್ಥ ಸಚಿನ್ ವಾಜೆ ಬಂಧನದ ಬೆನ್ನಲ್ಲೇ ಗೃಹರಕ್ಷಕ ದಳಕ್ಕೆ ವರ್ಗಾವಣೆಗೊಂಡ ಮುಂಬೈ ಮಾಜಿ ಪೋಲಿಸ್ ಆಯುಕ್ತ ಪರಂಬೀರ್ ಸಿಂಗ್ ಎನ್ಸಿಪಿ ಮುಖಂಡ ಅನಿಲ್ ದೇಶಮುಖ್ ವಿರುದ್ಧ ಪ್ರತಿ ತಿಂಗಳು 100 ಕೋಟಿ ಲಂಚ ಸಂಗ್ರಹದ ಆರೋಪ ಮಾಡಿದ್ದು, ಈ ಕುರಿತು ಸಿಬಿಐ ತನಿಖೆ ನಡೆಯಬೇಕೆಂದು ಆಗ್ರಹಿಸಿ ಹೈಕೋರ್ಟ್ ಮೆಟ್ಟಲೇರಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗ ಮಹಾರಾಷ್ಟ್ರದ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿ, ಶೋಧ ಕಾರ್ಯಾಚರಣೆ ನಡೆಸಿದೆ. ಕೆಲವೇ ಗಂಟೆಗಳ ಮೊದಲು ಅನಿಲ್ ದೇಶಮುಖ್ ಅವರ ನಿವಾಸದಿಂದ ಹಿಂತಿರುಗಿದೆ. ಅದೇ ಸಮಯದಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ನಿವಾಸದಲ್ಲಿ ತುರ್ತು ಸಭೆ ನಡೆದಿರುವುದು ತಿಳಿದುಬಂದಿದೆ.
ಸಿಬಿಐ ಈಗ ಪ್ರಾಥಮಿಕ ತನಿಖೆಯನ್ನು ನಿಯಮಿತ ಪ್ರಕರಣವನ್ನಾಗಿ ಪರಿವರ್ತಿಸಿದೆ ಮತ್ತು ಸಿಬಿಐ ಅನಿಲ್ ದೇಶ್ಮುಖ್ ಅವರ ನಿವಾಸದ ಮೇಲೆ ಸುಮಾರು 6.5 ಗಂಟೆಗಳ ಕಾಲ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದೆ, ಎನ್ನಲಾಗಿದೆ.