ಅಮ್ಮನಿಗೆ ಕೊರೊನಾ ಸೋಂಕು ತಾಯಿಯ ನರಳಾಟಕ್ಕೆ ನೊಂದ ಮಗ ಆತ್ಮಹತ್ಯೆಗೆ ಶರಣು | ಜನತಾ ನ್ಯೂಸ್
ಹಾಸನ : ಯುವಕನೋರ್ವ ಕರೊನಾ ಸೋಂಕಿತ ತಾಯಿಯ ನರಳಾಟ ನೋಡಲಾಗದೆ ಆಸ್ಪತ್ರೆಯಲ್ಲೇ ನೇಣಿಗೆ ಶರಣಾಗಿದ್ದಾನೆ.
ಶರತ್ ಕುಮಾರ್ (30) ಎಂಬಾತ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೂಲತಃ ಕೊಡಗು ಜಿಲ್ಲೆ ಶನಿವಾರಸಂತೆ ಸಮೀಪದ ಮಾದರೆ ಗ್ರಾಮದವರಾದ ಶರತ್, ಬೆಂಗಳೂರಿನ ರಿಲಾಯನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಇತ್ತೀಚೆಗೆ ಕೆಲಸ ತೊರೆದು ಊರಿಗೆ ಬಂದಿದ್ದರು. ಮೃತನ ತಾಯಿಗೆ ಕೋವಿಡ್ ಸೋಂಕು ತಗುಲಿರುವ ಕಾರಣ ಹಾಸನದ ಜಯ ಚಾಮರಾಜೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದ್ದು, 11 ದಿನಗಳಿಂದ ಚಿಕಿತ್ಸೆ ನೀಡಲಾಗುತಿತ್ತು.
ನಿನ್ನೆ ರಾತ್ರಿ ಸಹೋದರ ಶಶಿಕುಮಾರ್ಗೆ ಕರೆ ಮಾಡಿದ್ದ ಶರತ್, ಅಮ್ಮ ತುಂಬಾ ನೋವು ಅನುಭವಿಸುತ್ತಿದ್ದಾರೆ. ನನ್ನಿಂದ ಇದನ್ನು ನೋಡಲು ಸಾಧ್ಯವಿಲ್ಲ ದಯಮಾಡಿ ಆಸ್ಪತ್ರೆಗೆ ಬಾ ಎಂದಿದ್ದನಂತೆ.
ಸಹೋದರ ಆಸ್ಪತ್ರೆಗೆ ಬಂದು ನೋಡಿದಾಗ ಅಲ್ಲಿ ಶರತ್ ಇರಲಿಲ್ಲ. ಇಂದು ಬೆಳಗ್ಗೆ ಆಸ್ಪತ್ರೆಯ ಏಳನೇ ಮಹಡಿಯ ಮೇಲೆ ನೀರಿನ ಟ್ಯಾಂಕ್ನ ಪೈಪ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಾಯಿ ಆಸ್ಪತ್ರೆಯಲ್ಲಿ ಅನುಭವಿಸುತ್ತಿರುವ ನೋವಿನಿಂದ ನೊಂದು ಶರತ್ ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಹಾಸನ ನಗರ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.