ಅಣ್ಣ ತಮ್ಮಂದಿರಿಬ್ಬರು ಕಾಲುಜಾರಿ ಬಾವಿಗೆ ಬಿದ್ದು ದುರ್ಮರಣ | ಜನತಾ ನ್ಯೂಸ್
ವಿಜಯಪುರ : ಜಿಲ್ಲೆಯ ಮುದ್ದೇಬಿಹಾಳದ ತಾಳಿಕೋಟೆ ಬೈಪಾಸ್ ರಸ್ತೆ ಹತ್ತಿರದ ತೆರೆದ ಬಾವಿಯಲ್ಲಿ ಕಾಲುಜಾರಿ ಬಿದ್ದು ಅಣ್ಣ ತಮ್ಮಂದಿರಿಬ್ಬರು ಮೃತಪಟ್ಟ ದುರ್ಘಟನೆ ಜರುಗಿದೆ.
ಮೃತರನ್ನು ಮುದ್ದೇಬಿಹಾಳ ಆಶ್ರಯ ಕಾಲೋನಿ ನಿವಾಸಿ ಸುನೀಲ ಹಡಪದ ಅವರ ಮಕ್ಕಳಾದ ಪ್ರೇಮನಾಥ (13), ಪುನೀತ್ (10) ಎಂದು ಗುರುತಿಸಲಾಗಿದೆ.
ಮನೆಯಲ್ಲಿ ಸಹೋದರಿಯನ್ನು ಬಿಟ್ಟು ತಾವೇ ಬಟ್ಟೆ ತೊಳೆಯಲೆಂದು ನೀರಿಗೆ ಇಳಿದಿದ್ದಾರೆ. ಈ ವೇಳೆ, ಕಾಲು ಜಾರಿ ನೀರಲ್ಲಿ ಬಿದ್ದು ಮುಳುಗಿದ್ದಾರೆ. ಜನವಸತಿ ಪ್ರದೇಶದಿಂದ ಬಾವಿ ದೂರದಲ್ಲಿರುವ ಕಾರಣ ಮಕ್ಕಳು ಬಾವಿಗೆ ಬಿದ್ದಿರುವುದು ತಕ್ಷಣ ಗೊತ್ತಾಗಿಲ್ಲ.
ಬಳಿಕ ಸ್ಥಳೀಯರೊಬ್ಬರು ಬಾವಿಯ ಸಮೀಪದಲ್ಲಿ ಮಕ್ಕಳ ಬಟ್ಟೆ ಕಂಡು ಪೊಲೀಸರಿಗೆ ಹಾಗೂ ಅಗ್ನಿಶಾಮಕ ಠಾಣೆಯ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ. ಮೃತದೇಹಗಳನ್ನು ಸರ್ಕಾರಿ ತಾಲೂಕು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ.
ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.