ಕೋವಿಡ್ ಬಂದು ನಾನ್ ಸತ್ತೋದ್ರು ಪರವಾಗಿಲ್ಲ.. ನಾಳೆ ಸಿಎಂ ಮನೆ ಮುಂದೆ ಧರಣಿ ಕೂರೋದೆ: ರೇವಣ್ಣ | ಜನತಾ ನ್ಯೂಸ್
ಹಾಸನ : ಕೋವಿಡ್ ಬಂದು ಬೇಕಾದ್ರೆ ನಾನ್ ಸತ್ತೋದ್ರು ಪರವಾಗಿಲ್ಲ. ಯಾರು ಹೇಳಿದ್ರೂ ಕೇಳಲ್ಲ. ನಾಳೆ ಸಿಎಂ ಮನೆ ಮುಂದೆ ಹೋಗಿ ಅಲ್ಲಿಯೇ ಧರಣಿ ಕೂರೋದೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ.
ಜನರು ರೋಡಲ್ಲಿ ಬಿದ್ದು ಸಾಯ್ತಿದ್ದಾರೆ, ಹೇಳೋರು ಕೇಳೋರು ಯಾರು ಇಲ್ಲವೇ? ಖಾಸಗಿ ಆಸ್ಪತ್ರೆ ಬೆಡ್ಗಳು ಎಂಎಲ್ಎ ಮನೆಯವರಿಗೆ ಮತ್ತು ಅವರ ಸಂಬಂಧಿಕರು, ಅಧಿಕಾರಿಗಳ ಮಕ್ಕಳಿಗೆ ಮೀಸಲಿವೆ. ಹೇಳೋರು ಕೇಳೋರು ಯಾರೂ ಇಲ್ವೆ? ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ರಾಜ್ಯ ಸರ್ಕಾರವನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಹಾಸನ ಜಿಲ್ಲೆಗೆ ಮಲತಾಯಿ ಧೋರಣೆ ತೋರುತ್ತಿದ್ದಾರೆ. ಹಾಸನ ಹಿಮ್ಸ್ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಕೃಷ್ಣಮೂರ್ತಿ ಅವರನ್ನ ದಿಢೀರ್ ವರ್ಗಾವಣೆ ಮಾಡಿರುವ ಸರ್ಕಾರದ ವಿರುದ್ಧ ಗರಂ ಆದ ರೇವಣ್ಣ, ನಮ್ಮ ಜಿಲ್ಲಾಸ್ಪತ್ರೆಯಲ್ಲಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ರೆಮ್ಡಿಸಿವಿಯರ್ ಚುಚ್ಚುಮದ್ದು ಸಿಕ್ತಿಲ್ಲ. ಜನ ಸಾಯುತ್ತಿದ್ದಾರೆ, ಇವನ್ನೆಲ್ಲಾ ನೋಡಿಕೊಂಡು ನಾನು ಬದುಕಿರಬೇಕಾ? ಹಾಗಾಗಿ ನಾಳೆ ಬೆಳಗ್ಗೆ ಎದ್ದು ಶಿವಪ್ಪನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಕೊಂಡು ಒಂಬತ್ತು ಗಂಟೆ ಒಳಗೆ ಮುಖ್ಯಮಂತ್ರಿ ಮನೆ ಮುಂದೆ ಅಲ್ಲೇ ಮಲ್ಕೊಂಡು ಧರಣಿ ಮಾಡ್ತೀನಿ ಎಂದಿದ್ದಾರೆ.
ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರ ಪರಿಸ್ಥಿತಿ ಶೋಚನೀಯವಾಗಿದೆ. ಸಂಕಷ್ಟ ಪರಿಸ್ಥಿತಿಯಲ್ಲಿ ಬಡವರಿಗೆ ರಾಗಿ, ಅಕ್ಕಿ, ಗೋಧಿ, ಸೇರಿದಂತೆ ಒಂದೊಂದು ಕುಟುಂಬಕ್ಕೆ ₹5 ಸಾವಿರ ಕೊಡಿ. ಬಡವರ ಶಾಪ ಒಳ್ಳೆದಲ್ಲ. ರಾಜ್ಯದ ತೆರಿಗೆ ಹಣದಲ್ಲಿ ಬಡವರಿಗೆ ಇಂಥ ಸಂದರ್ಭದಲ್ಲಿ ಕೊಡಿ ಎಂದು ಆಗ್ರಹ ಮಾಡಿದರು.
ನನಗೆ ಕರೊನಾ ಬಂದ್ರೂ ಪರವಾಗಿಲ್ಲ. ಸಿಎಂ ಮನೆ ಮುಂದೆ ಧರಣಿ ಮಾಡಿ ಅಲ್ಲಿಯೇ ಮಲಗುತ್ತೇನೆ. ಕೂಡಲೇ ಜಿಲ್ಲಾ ಸರ್ಜನ್ ವರ್ಗಾವಣೆ ರದ್ದು ಮಾಡಲಿ ಎಂದು ರೇವಣ್ಣ ಆಗ್ರಹಿಸಿದರು. ನಮ್ಮಪ್ಪ ಹೇಳಿದರೂ ನಾನು ಕೇಳಲ್ಲ, ಹೋರಾಡುತ್ತೇನೆ. ನಮ್ಮ ಜನವೇ ಇಲ್ಲ ಅಂದಮೇಲೆ ನನ್ನ ಪ್ರಾಣ ಇಟ್ಕೊಂಡು ಏನು ಮಾಡೋದು? ಮೇ ತಿಂಗಳ ಅಂತಿಮದೊಳಗೆ ಯಾರು ಉಳೀತಾರೆ, ಯಾರು ಇರಲ್ಲ ಅನ್ನೊದು ಗೊತ್ತಿಲ್ಲ. ಈ ಮಾತನ್ನ ತಜ್ಞರು ಹೇಳುತ್ತಿದ್ದಾರೆ ಎಂದರು.