ಕದಂಬ ಜ್ಯೋತಿ 2018 ರಥಯಾತ್ರೆಗೆ ಸ್ವಾಗತ
ಭಟ್ಕಳ : ಕದಂಬೋತ್ಸವದ ಅಂಗವಾಗಿ ಗುಡ್ನಾಪುರದಿಂದ ಆರಂಭವಾದ ಕದಂಬ ಜ್ಯೋತಿ ರಥವು ಶಿವಮೊಗ್ಗ ಜಿಲ್ಲೆಯ ಸೊರಬ ಮತ್ತು ಸಾಗರದಿಂದ ಜಿಲ್ಲೆಯ ಮೂಲಕ ಇಂದು ಭಟ್ಕಳಕ್ಕೆ ಆಗಮಿಸಿದ್ದು, ಇಲ್ಲಿನ ಸಂಶುದ್ದೀನ್ ಸರ್ಕಲ ಬಳಿ ಸ್ವಾಗತಿಸಿ ಬರಮಾಡಿಕೊಂಡ ತಹಸೀಲ್ದಾರ ವಿ.ಎನ್ ಬಾಡ್ಕರ ಪೂಜೆ ಸಲ್ಲಿಸಿದರು.
ಗುಡ್ನಾಪುರದಿಂದ ಜನವರಿ 31ರಂದು ಆರಂಭವಾದ ಕದಂಬ ಜ್ಯೋತಿ ರಥಯಾತ್ರೆಯೂ ಹಾನಗಲ್, ಅಕ್ಕಿಆಲೂರು, ಸೊರಬ, ಸಾಗರ, ಕಾರ್ಗಲ್, ಹಾಡುವಳ್ಳಿ ಮಾರ್ಗವಾಗಿ ಸುಮಾರು 380 ಕಿ.ಮೀ. ವ್ಯಾಪ್ತಿಯಲ್ಲಿ ಸಂಚಾರ ಮಾಡಿದ್ದು ಜಿಲ್ಲೆಯ ಗಡಿಭಾಗವಾದ ಭಟ್ಕಳಕ್ಕೆ ಆಗಮಿಸಿತು. ಕದಂಬ ಜ್ಯೋತಿ ರಥಯಾತ್ರೆಯ ನಿಮಿತ್ತ ವಿಶೇಷ ವಾಹನವನ್ನು ಸುಂದರವಾಗಿ ತಯಾರಿಸಲಾಗಿದ್ದು, ಸಾರ್ವಜನಿಕರಿಗೆ ಆಕರ್ಷಣೆಯ ಕೇಂದ್ರವಾಗಿತ್ತು. ಕದಂಬ ಜ್ಯೋತಿ ರಥಯಾತ್ರೆಗೆ ಪೂಜೆ ಸಲ್ಲಿಸಿದ ತಹಸೀಲ್ದಾರ ರಥಯಾತ್ರೆಯ ಕುರಿತು ಮಾತನಾಡಿದರು, "ಕದಂಬ ಜ್ಯೋತಿ ರಥಯಾತ್ರೆಯೂ ಬಳಿಕ ಮುರ್ಡೇಶ್ವರಕ್ಕೆ ತೆರಳಿ ಅಲ್ಲಿಂದ ರಾತ್ರಿ ಇಡಗುಂಜಿಯಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದು, ನಂತರ ಶುಕ್ರವಾರದಂದು ಮತ್ತೆ ರಥಯಾತ್ರೆಯೂ ಹೊನ್ನಾವರದಿಂದ ಆರಂಭವಾಗಿ ಬನವಾಸಿಗೆ ತೆರಳಲಿದೆ" ಎಂದರು.
ರಥಯಾತ್ರೆ ವಾಹನದಲ್ಲಿ ಬನವಾಸಿಯ ಪಿಡಿಒ ಕೃಷ್ಣಪ್ಪ, ಕಾರ್ಯದರ್ಶಿ ಅಣ್ಣಪ್ಪ ಎಮ್ ಸೇರಿದಂತೆ ಅಲ್ಲಿನ ಪೊಲೀಸ್ ಸಿಬ್ಬಂದಿಗಳು ಆಗಮಿಸಿದ್ದರು. ಭಟ್ಕಳಕ್ಕೆ ಆಗಮಿಸಿದ ಕದಂಬಜ್ಯೋತಿ ರಥಯಾತ್ರೆಯ ಸ್ವಾಗತಕ್ಕೆ, ಗ್ರೇಡ್ 2 ತಹಶೀಲ್ದಾರ ಮಂಜುನಾಥ, ಆರ್ಐ ರಾಜು ನಾಯ್ಕ, ಕಂದಾಯ ಇಲಾಖೆಯ ಸಿಬ್ಬಂದಿ ಶಂಭೂ, ಉದಯ ನಾಯ್ಕ, ಪುರಸಭೆಯ ಅಶ್ಫಕ್, ಅಬ್ದುರ್ ರಹೀಮ್, ಶಿಕ್ಷಕ ವೆಂಕಟೇಶ ನಾಯ್ಕ, ಕೃಷಿ ಇಲಾಖೆಯ ಜಿ.ಎನ್.ನಾಯ್ಕ ಸೇರಿದಂತೆ ಜನಪ್ರತಿನಿಧಿಗಳು ಮತ್ತು ಇನ್ನಿತರರು ಇದ್ದರು.