ಉತ್ತರ ಕನ್ನಡದಲ್ಲಿ ಬೆಳಗ್ಗೆ 6 ರಿಂದ 10 ರವರೆಗೆ ಮಾತ್ರ ಸಾರ್ವಜನಿಕರಿಗೆ ವ್ಯಾಪಾರ-ವಹಿವಾಟ ಮಾಡಲು ಅವಕಾಶ ! | ಜನತಾ ನ್ಯೂಸ್
ಉತ್ತರ ಕನ್ನಡ : ಸಾರ್ವಜನಿಕರ ವ್ಯಾಪಾರ-ವಹಿವಾಟಿಗೆ ಈ ಹಿಂದೆ ಮಾಡಲಾಗಿದ್ದ ಬೆಳಗ್ಗೆ 6 ರಿಂದ 12ರ ಸಮಯವನ್ನು ಮತ್ತೆ ಮೇ 7 ರಿಂದ ಬೆಳಗ್ಗೆ 6 ರಿಂದ 10 ರವರೆಗೆ ಮಾತ್ರ ಅವಕಾಶ ಕಲ್ಪಿಸಿ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಕಾರ್ಮಿಕ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ ತಿಳಿಸಿದ್ದಾರೆ.
ಈ ಹಿಂದೆ ಸರಕಾರ ನಿಗದಿಪಡಿಸಿದ್ದ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗಿನ ಸಮಯದಲ್ಲಿ ಜನ ಸಂದಣಿ ಹೆಚ್ಚಾಗುತ್ತಿದ್ದು, ಈ ಸಂದರ್ಭದಲ್ಲಿ ಜನರ ನಿರ್ವಹಣೆ ತುಂಬಾ ಕಷ್ಟವಾಗುತ್ತಿದೆ ಎಂದು ಹೇಳಿದರು.
ಕೋವಿಡ್-19 ಎರಡನೇ ಅಲೆಯ ಸಂಪೂರ್ಣ ನಿರ್ವಹಣೆಗೆ ಜಿಲ್ಲಾಡಳಿತದಿಂದ ಪೂರ್ವ ತಯಾರಿ ಮಾಡಿಕೊಂಡಿದ್ದು, ಕೋವಿಡ್ ತಡೆಯುವ ಶಕ್ತಿ, ಆಕ್ಸಿಜನ್ ನಿಯಂತ್ರಣ ಮತ್ತು ಸಂಗ್ರಹಿಸುವ ಶಕ್ತಿಯಿದೆ. ಹೀಗಾಗಿ ಇದೆಲ್ಲದರ ಆಧಾರದ ಮೇಲೆ ಜಿಲ್ಲೆಯಲ್ಲಿ ಮೇ 7 ರಿಂದ ಪ್ರತಿದಿನ ಬೆಳಗ್ಗೆ 6 ರಿಂದ 10 ರವರೆಗೆ ಮಾತ್ರ ಸಾರ್ವಜನಿಕರಿಗೆ ವ್ಯಾಪಾರ-ವಹಿವಾಟ ಮಾಡಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಜನರು ಈ ನಿರ್ಣಯಕ್ಕೆ ಸರಿಯಾಗಿ ಸ್ಪಂದಿಸದಿದ್ದರೆ ಅನಿವಾರ್ಯವಾಗಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಿಸಬೇಕಾಗುತ್ತದೆ. ಜಿಲ್ಲೆಯ ಜನರು ಇದ್ಯಾವುದಕ್ಕೂ ಅವಕಾಶ ಕೊಡಬಾರದು.
ಅನಗತ್ಯವಾಗಿ ಮನೆಯಿಂದ ಹೊರಗಡೆ ಬರಬಾರದು. ತಪ್ಪದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಧರಿಸುವ ಮೂಲಕ ಪ್ರತಿಯೊಬ್ಬರೂ ಕೈಗಳಿಗೆ ಸಾನಿಟೈಸ್ ಮಾಡಿಕೊಳ್ಳಬೇಕು.
ಈಗಾಗಲೇ ಕೋವಿಡ್ ಲಕ್ಷಣಗಳಿರುವವರು ಹಾಗೂ ಹೋಮ್ ಐಸೋಲೇಶನ್ನಲ್ಲಿ ಇರುವವರು ತಮ್ಮ ವೈದ್ಯಕೀಯ ಪರಿಕ್ಷೆಯ ವರದಿ ಬರುವವರೆಗೆ ಸ್ವಲ್ಪ ಸಮಯ ಕುಟುಂಬದ ಸದಸ್ಯರಿಂದ ದೂರವಿರಬೇಕು. ಈ ಮೂಲಕ ಜನರು ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಹಾಗೂ ಸರಕಾರದೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ 561 ಆಕ್ಸಿಜನ್ ಬೆಡ್ಗಳಿವೆ. ಈ ಪೈಕಿ 272 ಬೆಡ್ಗಳು ಬಳಕೆಯಾಗುತ್ತಿದ್ದು, 289 ಬೆಡ್ಗಳು ಲಭ್ಯ ಇವೆ. ಜಿಲ್ಲೆಯಲ್ಲಿ ಒಟ್ಟಾರೆ 61 ವೆಂಟಿಲೇಟರ್ಗಳಿವೆ. ಈ ಪೈಕಿ 14 ಬಳಕೆಯಾಗುತ್ತಿದ್ದು, 47 ಲಭ್ಯ ಇವೆ. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿ ಒಳಗೊಂಡಂತೆ ಒಂದು ತಂಡ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಯನ್ನು ಒಳಗೊಂಡಂತೆ ಮತ್ತೊಂದು ತಂಡವನ್ನು ರಚಿಸಲಾಗಿದೆ.
ಈ ಎರಡು ತಂಡಗಳು ಸಮನ್ವಯತೆ ಆಧಾರದ ಮೇಲೆ ಕಾರ್ಯ ನಿರ್ವಹಿಸಲಿವೆ. ಆರೋಗ್ಯದ ಏನೇ ಸಮಸ್ಯೆಗಳಿದ್ದರೂ ಡಿಹೆಚ್ಒ ಅವರ ನೇತೃತ್ವದ ತಂಡ ಅಂತಿಮ ನಿರ್ಣಯ ಕೈಗೊಳ್ಳಲಿದೆ. ಅಗತ್ಯ ವಸ್ತುಗಳ ಪೂರೈಕೆಗೆ ಜಿಲ್ಲಾಧಿಕಾರಿ ನೇತೃತ್ವದ ತಂಡ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.