ಕೋವಿಡ್ ಲಸಿಕೆ ಖರೀದಿಗಾಗಿ 100 ಕೋಟಿ ರೂ. ನೀಡಲು ರಾಜ್ಯ ಕಾಂಗ್ರೆಸ್ ನಿರ್ಧಾರ: ಸಿದ್ದರಾಮಯ್ಯ ಘೋಷಣೆ | ಜನತಾ ನ್ಯೂಸ್
ಬೆಂಗಳೂರು : ಲಸಿಕೆ ಖರೀದಿಗಾಗಿ ಕಾಂಗ್ರೆಸ್ ಶಾಸಕರು, ಸಂಸದರು ಪ್ರದೇಶಾಭಿವೃದ್ಧಿ ನಿಧಿಯಿಂದ 100 ಕೋಟಿ ರೂ. ಕೊಡಲು ನಿರ್ಧರಿಸಿದ್ದೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಕೊರೊನಾ ಲಸಿಕೆ ಖರೀದಿಸಲು ಕಾಂಗ್ರೆಸ್ ಶಾಸಕರು ಹಾಗೂ ಸಂಸದರು ತಮ್ಮ ಕ್ಷೇತ್ರದ ಅಭಿವೃದ್ಧಿ ನಿಧಿಯಿಂದ ತಲಾ 1 ಕೋಟಿ ರೂ.ನಂತೆ 100 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿ ಜತೆ ಜಂಟಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಶಾಸಕರಿಗೆ ಎರಡು ಕೋಟಿ ಕ್ಷೇತ್ರ ಪ್ರದೇಶಾಭಿವೃದ್ಧಿ ನಿಧಿಯನ್ನು ಕೊಡುತ್ತದೆ. 95 ಕಾಂಗ್ರೆಸ್ ಶಾಸಕರು ಹಾಗೂ ಒಬ್ಬ ಎಂಪಿ ಹಾಗೂ ನಾಲ್ಕು ರಾಜ್ಯಸಭೆ ಸದಸ್ಯರು ಸೇರಿ ಒಟ್ಟು 100 ಮಂದಿ ಇದ್ದೇವೆ. ತಲಾ ಒಂದು ಕೋಟಿ ರೂ. ಶಾಸಕರ ನಿಧಿಯನ್ನು ಲಸಿಕೆ ಖರೀದಿಗೆ ಕೊಡುತ್ತೇವೆ. ಆ ಮೂಲಕ ಒಟ್ಟು 100 ಕೋಟಿ ರೂ. ಕೊಡಲು ನಿರ್ಧರಿಸಿದ್ದೇವೆ ಎಂದರು.
ಸಿಎಂ, ಡಿಸಿಎಂ ಸೇರಿದಂತೆ ವಿವಿಧ ಸಚಿವರು ಜಾಗತಿಕ ಟೆಂಡರ್ ಮೂಲಕ ಲಸಿಕೆ ಖರೀದಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಲಸಿಕೆ ಖರೀದಿಯ ಪ್ರತಿಯೊಂದು ವ್ಯವಹಾರವನ್ನೂ ರಾಜ್ಯ ಸರ್ಕಾರ ಪಾರದರ್ಶಕವಾಗಿ ಇಡಬೇಕು. ಸಿಎಂ ಬಿಎಸ್ವೈ ಅವರ ಕಣ್ಮುಚ್ಚಿಸಿ ಅವರ ಕೆಳಗಿನವರು ಅಕ್ರಮ ಮಾಡ್ತಿದ್ದಾರೆ. ಆದರೆ ನಮ್ಮ ಹಾಗೂ ಜನತೆಯ ಮುಂದೆ ಲಸಿಕೆ ಖರೀದಿಯ ಪಾರದರ್ಶಕ ವ್ಯವಹಾರವನ್ನ ನೀಡಲೇಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.
ಜನರು ಯಾವುದನ್ನು ನಂಬಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ದೇಶ ಹಾಗೂ ಕೋರ್ಟ್ಗಳ ದಾರಿ ತಪ್ಪಿಸುತ್ತಿದ್ದಾರೆ. ಯಾವ ಧರ್ಮ, ಯಾವ ಜಾತಿ, ಯಾವ ವ್ಯಕ್ತಿಯನ್ನು ಈ ಕೊರೊನಾ ಬಿಡಲ್ಲ. ಕೇಂದ್ರ 45+ ವಯೋಮಾನದವರಿಗೆ ನಾವೇ ಲಸಿಕೆ ಕೊಡುತ್ತೇವೆ ಎಂದಿದ್ದಾರೆ. 18+ಗೆ ರಾಜ್ಯ ಸರ್ಕಾರವೇ ಲಸಿಕೆ ಕೊಡುವ ಹೊಣೆ ಹೊರಬೇಕು ಎಂದಿದೆ. ಇದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸವಾಗಿದೆ. 138 ಕೋಟಿ ಜನಸಂಖ್ಯೆ ಇದೆ. ಅವರಿಗೆಲ್ಲ ಕೇಂದ್ರ ಸರ್ಕಾರವೇ ಲಸಿಕೆ ಉಚಿತವಾಗಿ ಕೊಡಬೇಕು. ಈ ಸರ್ಕಾರ ಜನರ ರಕ್ಷಣೆ ಮಾಡಲುವಲ್ಲಿ, ಲಸಿಕೆ ಕೊಡಲು ವಿಫಲವಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ರಾಜ್ಯದ ಪ್ರತಿಯೊಬ್ಬರಿಗೆ ಕೊರೊನಾ ಲಸಿಕೆ ದೊರೆಯುವಂತಾಗಬೇಕು ಎಂಬುದು ನಮ್ಮ ಬಯಕೆ. ಆದ್ದರಿಂದ ಕಾಂಗ್ರೆಸ್ ನಲ್ಲಿ 99 ಶಾಸಕರು ಇದ್ದಾರೆ. ಸಂಸದರು ಹಾಗೂ ರಾಜ್ಯಸಭಾ ಸದಸ್ಯರ ಮೊತ್ತವನ್ನೂ ಸೇರಿಸಿ 100 ಕೋಟಿ ರೂ. ನೀಡಲಾಗುವುದು ಎಂದು ಅವರು ಹೇಳಿದರು.
100 ಕೋಟಿ ರೂ. ಮೊತ್ತವನ್ನು ಹೇಗೆ ಯಾರಿಗೆ ನೀಡಬೇಕು. ಲಸಿಕೆ ಖರೀದಿಗೆ ಹೇಗೆ ಬಳಸಬೇಕು ಎಂಬುದನ್ನು ನಾವು ಚಿಂತನೆ ನಡೆಸಿ ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.