ಮೋದಿಯನ್ನು ಟೀಕಿಸುವ ಪೋಸ್ಟರ್ ಹಂಚಿಕೊಂಡು, ನನ್ನನ್ನೂ ಬಂಧಿಸಿ ಎಂದ ರಾಹುಲ್ ಗಾಂಧಿ! | ಜನತಾ ನ್ಯೂಸ್
ನವದೆಹಲಿ: : ಕೋವಿಡ್ ನಿರ್ವಹಣೆ ಹಾಗೂ ಲಸಿಕೆಗಳ ಹಂಚಿಕೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ದೆಹಲಿ ನಗರದ ಅನೇಕ ಕಡೆಗಳಲ್ಲಿ ಬಿತ್ತಿಪತ್ರಗಳನ್ನು ಅಂಟಿಸಿದ್ದಕ್ಕಾಗಿ ಸುಮಾರು 17 ಜನರನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಇತರೆ ಮುಖಂಡರು ಕಿಡಿಕಾರಿದ್ದಾರೆ.
ಲಸಿಕೆಯನ್ನು ತಯಾರಿಸುವ ಪೂರ್ವದಲ್ಲಿ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಕೆಲವು ದೇಶಗಳಿಗೆ ಭಾರತವು ಇದಾಗಲೇ ಲಸಿಕೆಯನ್ನು ರಫ್ತು ಮಾಡಿದೆ. ಈ ಕುರಿತು ಕೇಂದ್ರ ಸರ್ಕಾರ ಇದಾಗಲೇ ಹಲವಾರು ಬಾರಿ ಸ್ಪಷ್ಟನೆಯನ್ನೂ ನೀಡಿದೆ. ಇದರ ಹೊರತಾಗಿಯೂ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿಗೆ ಧಕ್ಕೆ ಬರಲು ಉದ್ದೇಶಪೂರ್ವಕವಾಗಿ ಅವರ ವಿರುದ್ಧ ಗೋಡೆಗಳಿಗೆ ಪೋಸ್ಟರ್ ಅಂಟಿಸಲಾಗುತ್ತಿದೆ.
ನನ್ನನ್ನೂ ಬಂಧಿಸಿ ಎಂದು ರಾಹುಲ್ ಗಾಂಧಿ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಟ್ವೀಟ್ ಮಾಡಿದ್ದಾರೆ. ಇದರ ಜತೆಗೆ ಅವರು ಕಪ್ಪು ಹಿನ್ನೆಲೆಯಲ್ಲಿ ಪ್ರತಿಭಟನಾತ್ಮಕವಾಗಿ ಮೋದಿ ಜಿ, ನಮ್ಮ ಮಕ್ಕಳಿಗಾಗಿ ಮೀಸಲಿರಿಸಿದ್ದ ಲಸಿಕೆಗಳನ್ನು ಏಕೆ ವಿದೇಶಕ್ಕೆ ಕಳುಹಿಸಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ದೆಹಲಿಯ ಅನೇಕ ಭಾಗಗಳಲ್ಲಿ ಇದೇ ಬರಹವುಳ್ಳ ಬಿತ್ತಿಪತ್ರಗಳು ಪತ್ತೆಯಾಗಿದ್ದು, ಈ ಕಾರಣಕ್ಕೆ 17 ಮಂದಿಯನ್ನು ಬಂಧಿಸಲಾಗಿದೆ.
ಕೋವಿಡ್ ನಿರ್ವಹಣೆ ಹಾಗೂ ಲಸಿಕೆ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಸತತ ಟೀಕಾಪ್ರಹಾರ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ನನ್ನನ್ನೂ ಬಂಧಿಸುತ್ತೀರಾ? ಎಂದು ಸವಾಲು ಹಾಕಿದ್ದಾರೆ.
ಪೊಲೀಸರಿಗೆ ಇದಾಗಲೇ ಕೆಲವು ಆರೋಪಿಗಳು ಸೆರೆ ಸಿಕ್ಕಿದ್ದು ಅವರು ತಾವು 500-1000 ರೂಪಾಯಿಗಳನ್ನು ಪಡೆದು ಪೋಸ್ಟರ್ ಅಂಟಿಸುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಮೋದಿಜಿ ಹಮಾರೆ ಬಚ್ಚೋಂಕಿ ವ್ಯಾಕ್ಸಿನ್ ವಿದೇಶ್ ಕ್ಯೂ ಭೇಜ್ ದಿಯಾ ಎಂಬ ಭಿತ್ತಿಪತ್ರಗಳನ್ನು ನಗರದ ಹಲವಾರು ಭಾಗಗಳಲ್ಲಿ ಅಂಟಿಸಿದ್ದರು. ಇದರಲ್ಲಿ ಕೆಲವು ಟೀಕೆಗಳನ್ನೂ ಮಾಡಲಾಗಿದೆ. ದೆಹಲಿಯ ಹಲವು ಭಾಗಗಳಲ್ಲಿ ಈ ರೀತಿ ಪೋಸ್ಟರ್ ಅಂಟಿಸುವ ಮೂಲಕ ಜನರಿಗೆ ಲಸಿಕೆ ಕುರಿತು ಹಾಗೂ ಪ್ರಧಾನಿ ವಿರುದ್ಧ ಕೆಟ್ಟ ಸಂದೇಶ ಸಾರಿರುವ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 17 ಮಂದಿಯ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಮಧ್ಯವರ್ತಿಗಳ ಮೂಲಕ ಈ ಹಣ ಸಂದಾಯವಾಗಿದ್ದು, ಇದರ ಕಿಂಗ್ಪಿನ್ಗಳ ಬಗ್ಗೆ ಪೊಲೀಸರು ಹುಟುಕಾಟ ನಡೆಸುತ್ತಿದ್ದಾರೆ.