ಸಿಬಿಐ ಕಚೇರಿ ಮೇಲೆ ಟಿಎಂಸಿ ಕಾರ್ಯಕರ್ತರ ದಾಳಿ : ಕಾನೂನು ಸುವ್ಯವಸ್ಥೆ ಕುರಿತು ರಾಜ್ಯಪಾಲರ ಎಚ್ಚರಿಕೆ ರವಾನೆ | ಜನತಾ ನ್ಯೂಸ್
ಕೊಲ್ಕೊತ್ತಾ : ಸಿಬಿಐ ಸೋಮವಾರ ಏಕಕಾಲದಲ್ಲಿ ದಾಳಿಗಳನ್ನು ಪ್ರಾರಂಭಿಸಿದ್ದು, ನಂತರ ಟಿಎಂಸಿ ಘಟಾನುಘಟಿಗಳು ಮತ್ತು ಪಶ್ಚಿಮ ಬಂಗಾಳದ ಮಂತ್ರಿಗಳಾದ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ ಮತ್ತು ಶಾಸಕ ಮದನ್ ಮಿತ್ರಾ ಅವರನ್ನು ನಾರದಾ ಸ್ಟಿಂಗ್ ಪ್ರಕರಣದ ತನಿಖೆಯಲ್ಲಿ ಬಂಧಿಸಿದೆ. ಇದಾದ ಕೆಲವೇ ಗಂಟೆಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಬಿಐ ಕಚೇರಿಯನ್ನು ತಲುಪಿದ್ದಾರೆ ಹಾಗೂ ಮಮತಾ ಸುಮಾರು ಆರು ಗಂಟೆಗಳ ಕಾಲ ಅಲ್ಲಿಯೇ ಇದ್ದರು.
ಸಚಿವರು ಮತ್ತು ಇತರರನ್ನು ಬಂಧಿಸಿದ ನಂತರ ಪಶ್ಚಿಮ ಬಂಗಾಳದ ಸಿಬಿಐ ಕಚೇರಿಯ ಹೊರಗೆ ಟಿಎಂಸಿ ಕಾರ್ಯಕರ್ತರು ನಡೆಸುತ್ತಿರುವ ಬೃಹತ್ ಪ್ರತಿಭಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ರಾಜ್ಯಪಾಲ ಜಗದೀಪ್ ಧಂಕರ್ ಅವರು, ರಾಜ್ಯದಲ್ಲಿ ಸಂಪೂರ್ಣ ಅರಾಜಕತೆ ಸೃಷ್ಟಿಯಾಗಿದೆ ಇದೆ, ಎಂದು ಸೋಮವಾರ ಕಳವಳ ವ್ಯಕ್ತಪಡಿಸಿದ್ದಾರೆ.
ಟಿಎಂಸಿ ನಾಯಕರೊಂದಿಗೆ, ಕೋಲ್ಕತಾ ಮಾಜಿ ಮೇಯರ್ ಸೋವನ್ ಚಟರ್ಜಿಯನ್ನೂ ಇದೇ ಪ್ರಕರಣದಲ್ಲಿ ಸಿಬಿಐ ವಶಕ್ಕೆ ಪಡೆದಿದೆ. ನಾರದಾ ಸ್ಟಿಂಗ್ ಕಾರ್ಯಾಚರಣೆ ಪ್ರಕರಣದಲ್ಲಿ ಟಿಎಂಸಿ ನಾಯಕರನ್ನು ಕೇಂದ್ರ ತನಿಖಾ ದಳ(ಸಿಬಿಐ) ಕಚೇರಿಗೆ ಕರೆದೊಯ್ಯಲಾಯಿತು ಮತ್ತು ನಂತರ ಅವರನ್ನು ಬಂಧಿಸಲಾಯಿತು. ಕೆಲವು ದಿನಗಳ ಹಿಂದೆಯೇ ಈ ಎಲ್ಲಾ ಟಿಎಂಸಿ ನಾಯಕರ ವಿರುದ್ಧ ಕಾನೂನು ಕ್ರಮ ಜರುಗಿಸಲು, ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ಸಿಬಿಐಗೆ ಅನುಮತಿ ನೀಡಿದ್ದರು.
ಸ್ಫೋಟಕ ಪರಿಸ್ಥಿತಿ ಯನ್ನು ನಿಯಂತ್ರಿಸುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸೂಚಿಸಿರುವ ರಾಜ್ಯಪಾಲರು, ಪೊಲೀಸರು ಮೌನವಾಗಿದ್ದು ಪ್ರತಿಭಟನಾಕಾರರ ವಿರುದ್ಧ ಯಾವುದೇ ಸ್ಪಷ್ಟ ಕ್ರಮ ತೆಗೆದುಕೊಳ್ಳುತ್ತಿಲ್ಲ, ಎಂದು ದೂರಿದ್ದಾರೆ. ಅಲ್ಲದೇ, ಇಂತಹ ಕಾನೂನುಬಾಹಿರತೆ ಮತ್ತು ಸಾಂವಿಧಾನಿಕ ಕಾರ್ಯವಿಧಾನದ ವೈಫಲ್ಯದ ಪರಿಣಾಮಗಳನ್ನು ಅರಿತುಕೊಳ್ಳಿ, ಎಂದು ಎಚ್ಚರಿಸಿದ್ದಾರೆ.
ಈ ಕುರಿತು ಹೇಳಿರುವ ರಾಜ್ಯಪಾಲರು, ಇದು ಸಂಪೂರ್ಣ ಕಾನೂನುಬಾಹಿರ ಮತ್ತು ಅರಾಜಕತೆ. ಪೊಲೀಸ್ ಮತ್ತು ಆಡಳಿತ ಮೌನವಾಗಿದೆ. ಅಂತಹ ಕಾನೂನುಬಾಹಿರತೆ ಮತ್ತು ಸಾಂವಿಧಾನಿಕ ಕಾರ್ಯವಿಧಾನದ ವೈಫಲ್ಯದ ಪರಿಣಾಮಗಳನ್ನು ನೀವು ಅರಿತುಕೊಳ್ಳುತ್ತೀರಿ ಎಂದು ಭಾವಿಸುವುದಾಗಿ, ಟ್ವೀಟ್ ಮೂಲಕ ಸಿಎಂ ಮಮತಾ ಬ್ಯಾನರ್ಜಿಗೆ ಸಂದೇಶ ರವಾನಿಸಿದ್ದಾರೆ.
ನಾರದ ರಹಸ್ಯ ಕಾರ್ಯಾಚರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮೂವರು ಟಿಎಂಸಿ ನಾಯಕರು ಸೇರಿದಂತೆ 5 ಆರೋಪಿಗಳನ್ನು ಬಂಧಿಸಿದ್ದು, ಆರೋಪಪಟ್ಟಿ ಸಹ ಸಲ್ಲಿಸಲಿದೆ. ರಾಜಕಾರಣಿಗಳು ಲಂಚ ತೆಗೆದುಕೊಳ್ಳುವುದು ಕ್ಯಾಮರಾದಲ್ಲಿ ಸೆರೆಯಾದ ಪ್ರಕರಣ ಇದಾಗಿದ್ದು, ಪಶ್ಚಿಮ ಬಂಗಾಳ ಸರ್ಕಾರದಲ್ಲಿ ತೀವ್ರ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.