ಅಂತ್ಯಸಂಸ್ಕಾರಕ್ಕೆ ಹೋದ ಒಂದೇ ಗ್ರಾಮದ 128 ಜನರಿಗೆ ಕೊರೊನಾ! | ಜನತಾ ನ್ಯೂಸ್
ಚಿಕ್ಕಮಗಳೂರು : ಒಂದೇ ಗ್ರಾಮದ 128 ಜನರಿಗೆ ಕೊರೊನಾ ಪಾಸಿಟಿವ್ ಬಂದ ಘಟನೆ ಚಿಕ್ಕಮಗಳೂರು ತಾಲೂಕಿನ ಇಂದಿರಾನಗರ ಗ್ರಾಮದಲ್ಲಿ ನಡೆದಿದೆ.
ಇದೇ ಗ್ರಾಮದ 60 ವರ್ಷದ ಸಂಜೀವ್ ಎನ್ನುವವರು ಮೇ 14 ರಂದು ಸಾವನ್ನಪ್ಪಿದ್ದರು. ಆಸ್ಪತ್ರೆಯವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಮೃತದೇಹವನ್ನು ಹಸ್ತಾಂತರಿಸಿದ್ದರು.
ಮೇ 11ರಂದು ಸ್ವಾಬ್ ಟೆಸ್ಟ್ಗೆ ಕೊಟ್ಟಿದ್ದ ಸಂಜೀವ್ ಅವರ ಕೊವಿಡ್ ರಿಪೋರ್ಟ್ ಬಂದಿದ್ದು ಮೇ 14ರಂದು. ಅಷ್ಟರಾಗಲೇ ಆ ವ್ಯಕ್ತಿ ಕೊನೆಯುಸಿರೆಳೆದಿದ್ದರು. ಖಾಸಗಿ ಆಸ್ಪತ್ರೆಯವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದರು. ಹೀಗಾಗಿ ಸಂಜೀವ್ ಅಂತ್ಯ ಸಂಸ್ಕಾರದಲ್ಲಿ ನೂರಾರು ಜನರು ಭಾಗವಹಿಸಿದ್ದರು.
ಅಂತ್ಯಸಂಸ್ಕಾರ ಮಾಡಿ ಜನರು ಮನೆಗೆ ಮರಳುತ್ತಿದ್ದಂತೆ ಮೃತನ ಕೋವಿಡ್ ಟೆಸ್ಟ್ ವರದಿ ಪಾಸಿಟಿವ್ ಬಂದಿದ್ದು, ವರದಿ ನೋಡಿ ಜನರು ಕಂಗಾಲಾಗಿದ್ದರು. ಬಳಿಕ ಗ್ರಾಮದ ಜನರು ಕೂಡ ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ. ಇದೀಗ ಅವರ ವರದಿ ಬಂದಿದ್ದು, 128 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಆ ಬಳಿಕ 200ಕ್ಕೂ ಹೆಚ್ಚು ಮಂದಿ ಪರೀಕ್ಷೆ ಮಾಡಿಸಿಕೊಂಡಿದ್ದು, ಅದರಲ್ಲಿ 128 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಹೀಗೆ ಊರಿನ ಹೆಚ್ಚಿನವರು ಕೊರೊನಾ ಸೋಂಕಿಗೆ ಒಳಗಾಗಿರೋದು ಜನರಲ್ಲಿ ಆತಂಕ ಮೂಡಿಸಿದೆ.
ಅಷ್ಟಕ್ಕೂ ಕೇವಲ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ ಜನರಿಗೆ ಮಾತ್ರ ಸೋಂಕು ತಗುಲಿದ್ಯಾ ಅಥವಾ ಬೇರೆ ಕಡೆಯಿಂದಲೂ ಸೋಂಕು ತಗುಲಿರುವ ಸಾಧ್ಯತೆ ಇದೆಯಾ ಎನ್ನುವುದರ ಕುರಿತು ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ.