ಜಿಲ್ಲಾಧಿಕಾರಿ ಹೆಚ್ಚು ಹೊತ್ತು ಸಭೆ ನಡೆಸುವುದನ್ನ ಬಿಡಲಿ, ಗ್ರಾಮೀಣ ಭಾಗಕ್ಕೆ ಹೋಗಿ ಕೆಲಸ ಮಾಡಲಿ | ಜನತಾ ನ್ಯೂಸ್
ಮೈಸೂರು : ಮೂರ್ನಾಲ್ಕು ಗಂಟೆ ಸತತವಾಗಿ ಮೀಟಿಂಗ್ ಮಾಡುವುದರಿಂದ ಪ್ರಯೋಜನವಿಲ್ಲ, ಬರೀ ಕಾಲಹರಣ ಆಗುತ್ತೆ ಅಷ್ಟೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಮಹಾನಗರ ಪಾಲಿಕೆ ಆಯುಕ್ತರು ನಗರ ವ್ಯಾಪ್ತಿ, ಜಿಲ್ಲಾ ಪಂಚಾಯಿತಿ ಸಿಇಒ ಅವರು ಗ್ರಾಮಾಂತರ ಪ್ರದೇಶದ 8 ವಿಧಾನಸಭಾ ಕ್ಷೇತ್ರಗಳ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಮೀಟಿಂಗ್, ವಿಡಿಯೋ ಕಾನ್ಫರೆನ್ಸ್ ಮಾಡುತ್ತಿದ್ದಾರೆ. ಆದರೆ ಸತತ ಸಭೆಯಿಂದ ಪ್ರಯೋಜನವಿಲ್ಲ ಎಂದು ಪ್ರತಾಪ್ ಸಿಂಹ ಆಕ್ರೋಶ ಹೊರಹಾಕಿದರು.
ಮೈಸೂರು ಜಿಲ್ಲೆ ಅಭಿರಾಮ್ ಜೀ ಶಂಕರ್, ಶಿಖಾ, ರಂದೀಪ್ ರಂತಹ ಮಾದರಿ ಅಧಿಕಾರಿಗಳನ್ನು ಕಂಡಿದೆ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಅವರು ಕೆಲಸ ಮಾಡಿದ್ದಾರೆ.
ಆ ನಿಟ್ಟಿನಲ್ಲಿ ಈಗಿರುವ ಜಿಲ್ಲಾಡಳಿತವೂ ಕೆಲಸ ಮಾಬೇಕೆಂಬುದು ನಮ್ಮ ನಿರೀಕ್ಷೆ. ಇದರಲ್ಲಿ ವೈಯಕ್ತಿಕತೆಯ ಪ್ರಶ್ನೆ ಇಲ್ಲ.
ಮೈಸೂರಿನಲ್ಲಿ ಮೂವರು ಐಎಎಸ್ ಕೆಡಾರ್ ಅಧಿಕಾರಿಗಳಿದ್ದಾರೆ. ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತೆ, ಜಿ.ಪಂ. ಸಿಇಓ ಇದ್ದಾರೆ. ಇವರು ಒಂದೊಂದು ಟಾಸ್ಕ್ ಫೋರ್ಸ್ ವಹಿಸಿಕೊಂಡು ಕೆಲಸ ಮಾಡಿದರೆ ಉತ್ತಮ. ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಕೋವಿಡ್ ಮಿತ್ರ ಸೇರಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ.
ಜನಪ್ರತಿನಿಧಿಗಳೂ ಟಾಸ್ಕ್ಫೋರ್ಸ್ ವಹಿಸಿ ಕೆಲಸ ಮಾಡ್ತಿದ್ದೇವೆ. ಆಕ್ಸಿಜನ್, ಬೆಡ್, ಆಸ್ಪತ್ರೆ ಸೇರಿ ಎಲ್ಲವನ್ನೂ ನೋಡಿಕೊಳ್ತಿದ್ದೇವೆ. ಜಿಲ್ಲಾಧಿಕಾರಿ ಹೆಚ್ಚು ಹೊತ್ತು ಸಭೆ ನಡೆಸುವುದನ್ನ ಬಿಡಲಿ. ಜಿಲ್ಲಾಧಿಕಾರಿಗಳು ಗ್ರಾಮೀಣ ಭಾಗಕ್ಕೆ ಹೋಗಿ ಕೆಲಸ ಮಾಡಲಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.