ನಿಯಮ ಉಲ್ಲಂಘಿಸಿ ಮದುವೆ ಮಾಡಿತ್ತಿದ್ದವರು ಅಧಿಕಾರಿಗಳನ್ನು ಕಂಡು ವಧುವನ್ನು ಬಿಟ್ಟು ಕಾಲ್ಕಿತ್ತ ವರ! | ಜನತಾ ನ್ಯೂಸ್
ಚಿಕ್ಕಮಗಳೂರು : ಕೊರೊನಾ ಸೋಂಕು ವ್ಯಾಪಕವಾಗಿ ಹರಿದಾಡುತ್ತಿರುವ ಕಾರಣದಿಂದಾಗಿ ಲಾಕ್ಡೌನ್ ಜಾರಿಯಲ್ಲಿದೆ. ಹಲವು ಕಟ್ಟುನಿಟ್ಟಿನ ಕ್ರಮವನ್ನು ಪಾಲಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಮದುವೆ-ಸಮಾರಂಭಗಳನ್ನು ಆದಷ್ಟು ಕಡಿಮೆ ಮಾಡಿ ಎಂದು ಸೂಚಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕರಿಕಲ್ಲಳ್ಳಿಯಲ್ಲಿ ಮದುವೆ ಕಾರ್ಯಕ್ರಮಕ್ಕೆ ಮನೆಯವರು ಸ್ಥಳೀಯವಾಗಿ ಪರವಾನಗಿ ಪಡೆದಿದ್ದರು. ಕೇವಲ ಹತ್ತು ಜನರನ್ನು ಮಾತ್ರ ಸೇರಿಸಲು ಅನುಮತಿ ಸಿಕ್ಕಿತ್ತು.
ವಧು ವರನ ಮನೆಯವರು ಕೇವಲ 10 ಜನರು ಸೇರಿ ಮದುವೆ ಮಾಡುವುದಾಗಿ ಜೋಡಿಹಳ್ಳಿ ಗ್ರಾಮ ಪಂಚಾಯತಿಯಿಂದ ಅನುಮತಿ ಪಡೆದಿದ್ದರು. ಆದರೆ ಮದುವೆ ದಿನದಂದು ಆ ನಿಯಮವನ್ನು ಬ್ರೇಕ್ ಮಾಡಿರುವುದು ಕಂಡುಬಂದಿದೆ.
ಮದುವೆ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಜನರಿಗಾಗಿ ಕುರ್ಚಿಗಳನ್ನು ಹಾಕಿರುವುದು ಕಂಡುಬಂದಿದೆ. ಬಂದ ಅತಿಥಿಗಳಿಗೆ ಭಾರೀ ಭೋಜನದ ವ್ಯವಸ್ಥೆ ಮಾಡಿದ್ದರು.
ಸಾಕಷ್ಟು ಮಂದಿ ಒಟ್ಟಿಗೆ ಪಂಕ್ತಿಯಲ್ಲಿ ಕುಳಿತು ಊಟ ಮಾಡಿ ಎದ್ದಿರುವುದೂ ತಿಳಿದುಬಂದಿದೆ.
ಈ ವಿಚಾರ ತಿಳಿದು ಜೋಡಿಹೋಚಿಹಳ್ಳಿ ಗ್ರಾ.ಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಆದರೆ ಮದುವೆಗೆ ಬಂದ ಅಧಿಕಾರಿಗಳನ್ನು ಕಂಡು ವಧುವನ್ನು ವೇದಿಕೆಯಲ್ಲೇ ಬಿಟ್ಟು ವರ ಓಡಿ ಹೋಗಿದ್ದಾನೆ. ನಂತರ ವಧು ಕೂಡ ವೇದಿಕೆಯಿಂದ ಕೆಳಗಿಳಿದು ಹೋಗಿದ್ದಾಳೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.