ಕೋವಿಡ್ ನಿಯಂತ್ರಣಕ್ಕೆ ಹೊಸ ಅಸ್ತ್ರ: ನಾಳೆಯಿಂದ ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿ ವಿಮಾನದ ಮೂಲಕ ಸ್ಯಾನಿಟೈಸೇಷನ್ | ಜನತಾ ನ್ಯೂಸ್
ಬೆಂಗಳೂರು : ಕೊರೊನಾ ನಿಯಂತ್ರಣಕ್ಕೆ ನಗರದಲ್ಲಿ ವಿಮಾನದ ಮೂಲಕ ಸ್ಯಾನಿಟೈಸ್ ಮಾಡುವ ಕಾರ್ಯಕ್ರಮಕ್ಕೆ ಇಂದು (ಮೇ 29) ಚಾಲನೆ ನೀಡಲಾಗಿದೆ. ಏರೋಡ್ರೋಮ್ ಮೂಲಕ ರಾಸಾಯನಿಕ ಸಿಂಪಡಣೆಗೆ ಚಾಲನೆ ಕೊಡಲಾಗಿದೆ.
ಮೊಟ್ಟ ಮೊದಲ ಬಾರಿಗೆ ರಾಜಧಾನಿ ಬೆಂಗಳೂರು ನಗರದಲ್ಲಿ ಪೈಲೆಟ್ ಪ್ರಾಜೆಕ್ಟ್ ಆಗಿ ಏರಿಯಲ್ ವರ್ಕ್ಸ್ ಏರೋ ವತಿಯಿಂದ ಬಿಬಿಎಂಪಿ ಸಹಯೋಗದಲ್ಲಿ ಈ ಕಾರ್ಯ ನಡೆಯಲಿದೆ.
ಬೆಂಗಳೂರಿನ ಜಕ್ಕೂರು ಏರೋಡ್ರೋಮ್ನಲ್ಲಿ ಯೋಜನೆ ಆರಂಭಿಸಿದ್ದು, ಕಂದಾಯ ಸಚಿವ ಆರ್. ಅಶೋಕ್, ಬಿಡಿಎ ಅಧ್ಯಕ್ಷ ವಿಶ್ವನಾಥ್, ಶಾಸಕ ಕೃಷ್ಣ ಭೈರೇಗೌಡರಿಂದ ಸ್ಯಾನಿಟೈಸೇಷನ್ಗೆ ಚಾಲನೆ ದೊರೆತಿದೆ.
ಬೆಂಗಳೂರಿನ ಗಲ್ಲಿಗಲ್ಲಿಗೂ ಎಂಟ್ರಿ ಕೊಡಲಿರುವ ಈ ಲಘುವಿಮಾನವು ಮೂರು ದಿನಗಳಲ್ಲಿ ನಗರದ ವಿವಿಧೆಡೆ ಆಂಟಿ ಮೈಕ್ರೋಬಯಲ್ ಸಲ್ಯೂಷನ್ಅನ್ನು ಸಿಂಪಡಿಸಲಿದೆ. ಕೇವಲ 8 ನಿಮಿಷಗಳಲ್ಲಿ ವೈರಸ್ನ ಕಥೆ ಮುಗಿಸುವ ಸಾಮರ್ಥ್ಯ ಹೊಂದಿರುವ ಆರ್ಗ್ಯಾನಿಕ್ ಸ್ಪ್ರೇ ಇದಾಗಿದೆ. ಈ ಔಷಧಿ ಸಿಂಪಡಿಸಿದರೆ ಶೇಕಡ 88 ರಷ್ಟು ವೈರಸ್ ಹರಡುವಿಕೆ ತಡೆಗಟ್ಟುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಾರುಕಟ್ಟೆ, ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತದೆ. ಗಂಟೆಗೆ 300 ಲೀ., 300 ಹೆಕ್ಟೇರ್ ಪ್ರದೇಶಕ್ಕೆ ಸ್ಯಾನಿಟೈಸ್ ಮಾಡಲಾಗುವುದು ಎನ್ನಲಾಗಿದೆ. ಏರ್ ಸ್ಪ್ರೇ ಸಿಂಪಡಣೆ ಬ್ಯಾಕ್ಟೀರಿಯಾ, ವೈರಸ್, ಶೀಲಿಂದ್ರಗಳ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ಹೇಳಲಾಗಿದೆ.