ಮೈಸೂರು ಜಿಲ್ಲಾಡಳಿತ ಕೊವಿಡ್ನಿಂದ ಸಾವನ್ನಪ್ಪಿದವರ ಸಂಖ್ಯೆ ಮುಚ್ಚಿಟ್ಟಿದೆ: ರೋಹಿಣಿ ಸಿಂಧೂರಿ ವಿರುದ್ಧ ಸಿಡಿದೆದ್ದ ಸಾ.ರಾ.ಮಹೇಶ್ | ಜನತಾ ನ್ಯೂಸ್
ಮೈಸೂರು : ಜಿಲ್ಲಾಡಳಿತ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯನ್ನು ಮುಚ್ಚಿಟ್ಟಿದೆ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿ ನಡೆಸಿದ ಸಾ.ರಾ. ಮಹೇಶ್, ರೋಹಿಣಿ ಸಿಂಧೂರಿ ಅವರಿಂದ ಸರ್ಕಾರಕ್ಕೆ ಸುಳ್ಳು ಲೆಕ್ಕ ಕೊಡಲಾಗಿದೆ. ಮೈಸೂರು ಜಿಲ್ಲೆ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಮೈಸೂರು ಜಿಲ್ಲೆ ನಂ 1. ಅತಿಹೆಚ್ಚು ಸಾವು ಆಗಿರುವ ಜಿಲ್ಲೆಗಳಲ್ಲೂ ಮೈಸೂರು ನಂ 1. ಆದರೂ ಸುಳ್ಳು ಲೆಕ್ಕ ಕೊಟ್ಟ ಸರ್ಕಾರದ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಾವಿನ ಸಂಖ್ಯೆಯನ್ನು ಏಕೆ ಮುಚ್ಚಿಡುತ್ತಿದ್ದೀರಿ? ನಿಮಗೆ ಮಾನವೀಯತೆ, ಮನುಷ್ಯತ್ವ, ತಾಯಿ ಹೃದಯ ಇಲ್ಲವೇ? ಸರ್ಕಾರವನ್ನೂ ಏಕೆ ದಿಕ್ಕು ತಪ್ಪಿಸುತ್ತಿದ್ದೀರಿ? ಸಾವಿನಲ್ಲೂ ಸುಳ್ಳು ಲೆಕ್ಕ ಕೊಟ್ಟಿದ್ದೇಕೆ? ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನ ಶಾಸಕ ಸಾ.ರಾ.ಮಹೇಶ್ ಖಾರವಾಗಿಯೇ ಪ್ರಶ್ನಿಸಿದ್ದಾರೆ.
ಮೈಸೂರು ನಗರ ವ್ಯಾಪ್ತಿಯಲ್ಲೇ 969 ಸೋಂಕಿತರು ಸಾವನ್ನಪ್ಪಿದ್ದಾರೆ. ಮೇ 1 ರಿಂದ 29ರ ವರೆಗೆ 969 ಸೋಂಕಿತರು ಮೃತಪಟ್ಟಿದ್ದಾರೆ. ಆದರೆ ಜಿಲ್ಲಾಡಳಿತ ಕೇವಲ 238 ಜನರ ಲೆಕ್ಕವನ್ನು ಕೊಟ್ಟಿದೆ. 731 ಜನರ ಸಾವಿನ ಲೆಕ್ಕವನ್ನು ಜಿಲ್ಲಾಡಳಿತ ಕೊಟ್ಟಿಲ್ಲ ಎಂದು ಜಿಲ್ಲಾಡಳಿತ ವಿರುದ್ಧ ಆರೋಪಿಸಿದ್ದಾರೆ.
ಈ ರೀತಿ ಲೆಕ್ಕ ಕೊಡುವುದಕ್ಕೆ ಐಎಎಸ್ ಏಕೆ ಬೇಕು? ಎಸ್ಎಸ್ಎಲ್ಸಿ ಓದಿದವರು ಕೊಡಬಹುದು. ಡಿಸಿ ರೋಹಿಣಿ ಸಿಂಧೂರಿ ತಮ್ಮ ಸಾರ್ವಜನಿಕ ಸೇವೆಯ ಎಲ್ಲವೂ ಇದೇ ರೀತಿ ಮೋಸದ್ದು. ಇಲ್ಲಿಗೆ ಕಳಂಕ ರಹಿತ ಒಳ್ಳೆಯ ಅಧಿಕಾರಿ ಬೇಕು. ಇದನ್ನು ನಾನು ಅವತ್ತೇ ಇದನ್ನು ಹೇಳಿದ್ದೆ. ಇದಕ್ಕಿಂತ ದಾಖಲಾತಿ ಬೇಕು ಅಂದರೆ ಸತ್ತವರ ಮನೆಗೆ ಹೋಗೋಣ. ಸಾವಿನ ಲೆಕ್ಕದ ಸಮಗ್ರ ತನಿಖೆಯಾಗಬೇಕು.
ಮೈಸೂರು ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಇಳಿಸಿದ್ದೇವೆ, ಮೈಸೂರಿನಲ್ಲಿ ನಾನು ಸಾಧನೆ ಮಾಡಿದ್ದೇನೆ ಅಂತ ತೋರಿಸಿಕೊಳ್ಳುತ್ತಿದ್ದಾರೆ. ಟೆಸ್ಟಿಂಗ್ ಕಡಿಮೆ ಮಾಡಿದ ಪರಿಣಾಮ ಕೇಸ್ ಕಡಿಮೆ ಆಗಿದೆ. ಈ ವಿಚಾರವನ್ನು ನಾನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಅವರ ಸೂಚನೆ ಬಳಿಕ 8000 ಟೆಸ್ಟಿಂಗ್ ಶುರುವಾಗಿದೆ.
ನಗರದಲ್ಲಿ ಕರೊನಾದಿಂದ ಮೃತಪಟ್ಟಿರುವ ಸಂಖ್ಯೆಯ ದಾಖಲೆ ತೆಗೆಸಿದ್ದೇನೆ. ಇನ್ನು ಮೈಸೂರು ಜಿಲ್ಲೆಯಲ್ಲಿ ಎಷ್ಟು ಸಾವಿರ ಜನ ಸತ್ತಿದ್ದಾರೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಅದರ ಮಾಹಿತಿಯನ್ನೂ ತರಿಸುತ್ತೇನೆ. ನಿನ್ನೆ ಕೆ.ಆರ್.ನಗರದಲ್ಲಿ ಸಾವು ಝೀರೋ ಅಂತ ಲೆಕ್ಕ ತೋರಿಸಿದ್ದಾರೆ. ಆದರೆ ನನ್ನ ಗಮನಕ್ಕೆ ಬಂದಂತೆ ಚಿಕ್ಕನಾಯಕನಹಳ್ಳಿಯಲ್ಲಿ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡಲಾಗಿದೆ.
ಏಕೆ ಸಾವುಗಳನ್ನು ಮುಚ್ಚಿಡುತ್ತಿದ್ದೀರಿ? ಮೃತರ ಕುಟುಂಬಗಳಿಗೆ ಯಾವುದಾದರೂ ರೂಪದಲ್ಲಿ ಸಹಾಯ ಆಗಬೇಕಲ್ವ? ನಿಮ್ಮ ಸುಳ್ಳು ಲೆಕ್ಕದಿಂದಾಗಿ ಮೃತರ ಕುಟುಂಬಸ್ಥರಿಗೆ ಮೋಸ ಆಗೋದು ಬೇಡ ಎಂದು ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ.ಮಹೇಶ್ ಕಿಡಿಕಾರಿದ್ದರು.