ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ತಂದೆ-ತಾಯಿ ಬಳಿ ಸದ್ಯಕ್ಕೆ ಬರಲ್ಲ ಎಂದ ಸಿಡಿ ಲೇಡಿ | ಜನತಾ ನ್ಯೂಸ್
ಧಾರವಾಡ : ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಯುವತಿಯ ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸೋಮವಾರ ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠ ಇತ್ಯರ್ಥ ಪಡಿಸಿದೆ.
ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್ ಪೀಠವು ಯುವತಿ ಇರುವ ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಲು ರಿಜಿಸ್ಟ್ರಾರ್ ಜನರಲ್ಗೆ ಸೂಚಿಸಿತ್ತು. ಅದರಂತೆ ರಿಜಿಸ್ಟ್ರಾರ್ ಜನರಲ್ ಶಿವಶಂಕರೇಗೌಡ ಅವರು ಜಂಟಿ ರಿಜಿಸ್ಟ್ರಾರ್ ವರಲಕ್ಷ್ಮೀ ಅವರೊಂದಿಗೆ ಯುವತಿ ನಿವಾಸಕ್ಕೆ ಭೇಟಿ ನೀಡಿದ್ದರು. ಆ ವೇಳೆ ತಂದೆಯ ಆಪೇಕ್ಷೆಯಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ತಂದೆಯೊಂದಿಗೆ ಸಮಾಲೋಚಿಸಲು ಯುವತಿಗೆ ಅವಕಾಶ ನೀಡಲಾಯಿತು. ಆದರೆ ಯುವತಿ ಅದಕ್ಕೆ ನಕಾರ ಸೂಚಿಸಿದರು. ಇದೇ ವೇಳೆ ಅಕ್ರಮ ಬಂಧನದ ಆರೋಪವನ್ನು ಸಹ ಯುವತಿ ನಿರಾಕರಿಸಿದರು.
ನಾನು ಸುರಕ್ಷಿತವಾಗಿ ಇದ್ದೇನೆ. ಸದ್ಯ ಬೆಂಗಳೂರಿನಲ್ಲಿ ವಾಸವಿದ್ದೇನೆ. ನನ್ನ ಮೇಲೆ ಯಾರ ಒತ್ತಡವೂ ಇಲ್ಲ. ಸದ್ಯಕ್ಕೆ ನಾನು ತಂದೆ-ತಾಯಿ ಬಳಿ ಹೋಗಲು ಇಚ್ಛಿಸುವುದಿಲ್ಲ ಎಂದಳು.
ಯುವತಿಯ ಹೇಳಿಕೆ ಬಳಿಕ ಅರ್ಜಿ ನ್ಯಾಯಾಲಯ ಅರ್ಜಿಯನ್ನ ಇತ್ಯರ್ಥ ಪಡಿಸಿತು. ಎಸ್ಐಟಿ ವಿಚಾರಣೆ ಮುಗಿದ ಬಳಿಕ ತಂದೆಯನ್ನು ಭೇಟಿಯಾಗುವುದಾಗಿ ಯುವತಿ ಹೇಳಿದ್ದಾಳೆ.
ನನ್ನ ಮಗಳನ್ನು ಭೇಟಿ ಮಾಡಲು ಬಿಡುತ್ತಿಲ್ಲ, ಯಾರೋ ಬಲವಂತವಾಗಿ ಅವಳನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಸಿಡಿ ಕೇಸ್ನ ಯುವತಿ ಪಾಲಕರು ಆರೋಪಿಸಿದ್ದರು. ಮೇ 27ರಂದು ಯುವತಿ ತಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನ ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠ ನಡೆಸಿತು.