ಬಿಜೆಪಿಯವರು ಖಾಲಿ ಕೊಡ ಹೊತ್ತು ಸಂಭ್ರಮಿಸುತ್ತಿದ್ದಾರೆ : ಸಿದ್ದರಾಮಯ್ಯ ವ್ಯಂಗ್ಯ | ಜನತಾ ನ್ಯೂಸ್
ಬೆಂಗಳೂರು : ಬಿಜೆಪಿ ನಾಯಕರು ನಿನ್ನೆಗೆ ಮೋದಿಯವರ ನೇತೃತ್ವದ ಸರ್ಕಾರಕ್ಕೆ ಏಳು ವರ್ಷ ತುಂಬಿತೆಂದು ಖಾಲಿ ಕೊಡ ಹೊತ್ತುಕೊಂಡು ಸಂಭ್ರಮ ಪಟ್ಟಿದ್ದಾರೆ. ಮಾನವಂತ, ಸೂಕ್ಷ್ಮ ಸಂವೇದನೆಯ ಜನ ಏನೆನ್ನುತ್ತಾರೆ ಎಂಬ ಬಗ್ಗೆ ಸಣ್ಣ ಸ್ಪಂದನೆಯೂ ಇಲ್ಲದ ಬಿಜೆಪಿ ನಾಯಕರು ತಮ್ಮ ಬೆನ್ನು ತಾವೇ ತಟ್ಟಿಕೊಂಡು ಸಂಭ್ರಮಿಸಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಎನ್ ಡಿ ಎ ಸರ್ಕಾರ 7 ವರ್ಷ ಪೂರೈಸಿದೆ. ಸಾಧನೆ ಮಾಡಿದೆವೆಂದು ಖಾಲಿ ಕೊಡ ಹೊತ್ತು ಬಿಜೆಪಿ ನಾಯಕರು ಸಂಭ್ರಮಿಸುತ್ತಿದ್ದಾರೆ. ದೇಶದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಯೂ ಗಗನಮುಖಿಯಾಗಿದೆ ಚರಿತ್ರೆಯಲ್ಲಿಯೇ ಈ ಮಟ್ಟಕ್ಕೆ ಬೆಲೆ ಏರಿಕೆಯೇ ಆಗಿರಲಿಲ್ಲ. ದೇಶದಲ್ಲಿ ಬೇಡದ ಕಾನೂನುಗಳನ್ನು ಜಾರಿ ಮಾಡಿದ್ದಾರೆ. ಅನಾಹುತಗಳನ್ನು ಮಾಡಿದ್ದೆ ಮೋದಿ ಸರ್ಕಾರದ ಸಾಧನೆಯಾಗಿದೆ. ದೇಶದ ಜನರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
70 ವರ್ಷಗಳ ಅವಧಿಯಲ್ಲಿ ದೇಶದ ಜನರು ಕಷ್ಟ ಪಟ್ಟು ಕಟ್ಟಿದ ಅಮೂಲ್ಯವಾದ ಕಾರ್ಖಾನೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ಕೇವಲ ಸುಳ್ಳಿನ ಕಾರ್ಖಾನೆಯನ್ನು ನಡೆಸುತ್ತಿದ್ದಾರೆ. ದೇಶ ವೇಗವಾಗಿ ಅಭಿವೃದ್ಧಿಯಾಗುತ್ತಿಲ್ಲ. ಬದಲಾಗಿ ವೇಗವಾಗಿ ಹಿಂದು ಹಿಂದಕ್ಕೆ ಕುಸಿದು ಹೋಗುತ್ತಿದೆ. ಮೋದಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬುದು ಕೇವಲ ಸುಳ್ಳು ಘೋಷಣೆ ಎಂಬುದನ್ನು ಸ್ವತಃ ಬಿ ಜೆ ಪಿ ಕಾರ್ಯಕರ್ತರೇ ಹೇಳುತ್ತಿದ್ದಾರೆ. ಹಾಗಿದ್ದರೆ ಯಾರ ವಿಕಾಸವಾಗಿದೆ?
ಸಬ್ ಕಾ ಸಾಥ್ ಅಂಬಾನಿ ಕಾ ವಿಕಾಸ್, ಅದಾನಿ ಕಾ ವಿಕಾಸ್, ಟೋಟಲಿ ಗುಜರಾತ್ ಕಾರ್ಪೊರೇಟ್ ಆದ್ಮಿ ಕಾ ವಿಶ್ವಾಸ್ ಆಗಿದೆ. ಯಾಕೆಂದರೆ ದೇಶದ ಜನ ಎರಡು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದಾರೆ. ಬೊಗಸೆ ಆಕ್ಸಿಜನ್ನಿಗೆ. ಒಂದು ಇಂಜೆಕ್ಷನ್ನಿಗೆ, ಒಂದು ಲಸಿಕೆಗೆ, ಉದ್ಯೋಗಕ್ಕೆ ಪರದಾಡುತ್ತಿದ್ದಾರೆ ಆದರೆ ಮೋದಿಯವರ ಸರ್ಕಾರದ ತುಘಲಕ್ ಆಡಳಿತ ನೀತಿಯಿಂದಾಗಿ ಈ ಕಾರ್ಪೊರೇಟ್ ಕಂಪೆನಿಗಳು ಕೊರೋನಾ ಅವಧಿಯಲ್ಲೂ 12 ಲಕ್ಷ ಕೋಟಿಗೂ ಅಧಿಕ ಹಣವನ್ನು ಜನರಿಂದ ದೋಚಿಕೊಂಡಿವೆ.
ಕೊರೊನಾ ನಿಯಂತ್ರಣಕ್ಕಿಂತ ಪ್ರಧಾನಿ ಮೋದಿಗೆ ಚುನಾವಣೆಗಳೆ ಮುಖ್ಯವಾಯ್ತು. ದೇಶದಲ್ಲಿ ಕೊರೊನಾ ಎರಡನೆ ಅಲೆ ಅಬ್ಬರಕ್ಕೆ ಮೋದಿ, ಅಮಿತ್ ಶಾ ಅವರೇ ಕಾರಣ. ಲಸಿಕೆಯನ್ನು ಮೊದಲು ದೇಶದಲ್ಲಿ ವಿತರಿಸುವುದನ್ನು ಬಿಟ್ಟು ವಿದೇಶಗಳಿಗೆ ರವಾನಿಸಿದರು ಇಂದು ದೇಶದ ಜನರು ಲಸಿಕೆ ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣ ಮಾಡಿದರು.
ಮೋದಿ ಪ್ರಧಾನಿಯಾದಾಗ ಎಲ್ಲಾ ಬೆಲೆಗಳು ಕಡಿಮೆಯಿತ್ತು. ಲೀಟರ್ ಡೀಸೆಲ್ ಬೆಲೆ 46 ರೂಪಾಯಿ 50 ಪೈಸೆ ಇತ್ತು. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 71 ರೂಪಾಯಿ ಇತ್ತು. ಆದರೆ ಇಂದು 100 ರೂಪಾಯಿ ಗಡಿ ತಲುಪಿದೆ. ದೇಶದ ಸಾಲ 53.11 ಲಕ್ಷ ಕೋಟಿ ರೂ ಇತ್ತು.
ಈಗ ದೇಶದ ಸಾಲ 135 ಲಕ್ಷ ಕೋಟಿ ರೂ.ಆಗಿದೆ. ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ. ಜಿಡಿಪಿ ದರವೂ ಕುಸಿದಿದೆ. ಆರ್ಥಿಕವಾಗಿ, ಔದ್ಯೋಗಿಕವಾಗಿ ದೇಶಕ್ಕೆ ಹಿನ್ನಡೆಯಾಗಿದೆ. ಬಂದರುಗಳು, ಕಾರ್ಖಾನೆಗಳು, ಸಂಸ್ಥೆಗಳನ್ನು ಮಾರಾಟ ಮಾಡಿದ್ದಾರೆ. ರೈತರಿಗೆ ಮಾರಕವಾದ ಕೃಷಿ ಕಾನೂನು ಜಾರಿಗೆ ತಂದಿದ್ದಾರೆ.
ನೋಟ್ ಬ್ಯಾನ್ ಮಾಡಿ ಏನು ಪ್ರಯೋಜನವಾಯಿತು? ಅನಾಹುತಗಳನ್ನು ಮಾಡಿದ್ದೇ ಮೋದಿ ಸಾಧನೆಯಾಗಿದೆ ನಾನು ಯಾವುದನ್ನೂ ಆರೋಪ ಮಾಡುತ್ತಿಲ್ಲ. ವರದಿಗಳನ್ನು ಆಧರಿಸಿಯೇ ಹೇಳುತ್ತಿದ್ದೇನೆ ಎಂದು ಗುಡುಗಿದ್ದಾರೆ.
ಯಡಿಯೂರಪ್ಪನವರು ಒಂದುವರೆ ವರ್ಷದಲ್ಲಿ 2.5 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇಷ್ಟೊಂದು ಸಾಲ ಏಕೆ ಮಾಡಿದರು? ಸಿಎಂ ಯಡಿಯೂರಪ್ಪ ಏನು ಮಾಡುತ್ತಿದ್ದಾರೆ ಗೊತ್ತಿಲ್ಲ. ಜನರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.