ನವಜಾತ ಶಿಶು ಕದ್ದು ರೂ.15 ಲಕ್ಷಕ್ಕೆ ಮಾರಾಟ ಮಾಡಿದ ವೈದ್ಯೆ ಬಂಧನ! | ಜನತಾ ನ್ಯೂಸ್
ಬೆಂಗಳೂರು : 2020ರ ಮೇ 29ರಂದು ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ನವಜಾತ ಶಿಶು ಕಳುವಾಗಿತ್ತು. ಈ ಪ್ರಕರಣ ಭೇದಿಸುವಲ್ಲಿ ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದು, ಈ ಸಂಬಂಧ ವೈದ್ಯೆಯೊಬ್ಬರನ್ನು ಬಂಧನಕ್ಕೊಳಪಡಿಸಿದ್ದಾರೆ.
ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯ ಮನೋವೈದ್ಯೆ ಡಾ.ರಶ್ಮಿ (34) ಬಂಧಿತ ವೈದ್ಯೆಯಾಗಿದ್ದಾರೆ. ವಿಚಾರಣೆ ವೇಳೆ ನವಜಾತ ಶಿಶು ಅಪಹರಿಸಿದ್ದ ವೈದ್ಯೆ, ಮಗುವನ್ನು ರೂ.15 ಲಕ್ಷಕ್ಕೆ ಕೊಪ್ಪಳದ ದಂಪತಿಗೆ ಮಾರಾಟ ಮಾಡಿರುವುದು ತಿಳಿದುಬಂದಿದೆ.
ಬಾಗಲಕೋಟೆಯ ರೈತ ದಂಪತಿಗೆ ಕೆಲ ವರ್ಷಗಳ ಹಿಂದೆ ಬುದ್ಧಿಮಾಂದ್ಯ ಮಗು ಜನಿಸಿತ್ತು. ಮಗುವಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಪಾಲಕರು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ಕರೆ ತಂದಿದ್ದರು. ಅಲ್ಲಿ ಮನೋವೈದ್ಯೆಯಾಗಿದ್ದ ಡಾ.ರಶ್ಮಿ ಮಗುವಿಗೆ ಚಿಕಿತ್ಸೆ ನೀಡುತ್ತಿದ್ದರು.
ಇನ್ನೊಂದು ಮಗುವಿಗೆ ಪ್ರಯತ್ನಪಟ್ಟರೂ ಮಗುವಾಗಿರಲಿಲ್ಲ ಎಂಬ ನೋವನ್ನು ದಂಪತಿ ರಶ್ಮಿ ಬಳಿ ಹೇಳಿಕೊಂಡಿದ್ದರು. ಹಣದ ಆಸೆಗೆ ಬಿದ್ದ ವೈದ್ಯೆ ಬಾಡಿಗೆ ತಾಯಿ ಮೂಲಕ ನಿಮ್ಮದೇ ಮಗು ಕೊಡಿಸುವುದಾಗಿ ನಂಬಿಸಿ ದಂಪತಿಯ ಅಂಡಾಣು ಮತ್ತು ವೀರ್ಯಾಣು ಪಡೆದಿದ್ದರು. ಅದನ್ನು ಬೇರೊಬ್ಬ ಮಹಿಳೆಯ ಗರ್ಭಕ್ಕೆ ಸೇರಿಸಿ ಮಗು ಬೆಳೆಸುವುದಾಗಿ ಹೇಳಿ 15 ಲಕ್ಷ ರೂ. ಪಡೆದಿದ್ದರು.
ಈ ಮಾತು ನಂಬಿದ್ದ ದಂಪತಿಗಳು, ವೈದ್ಯಗೆ ಹಣ ಕೊಡಲು ಸಮ್ಮತಿಸಿದ್ದಾರೆ. ಬಳಿಕ ಬಾಡಿಗೆ ತಾಯಿ ಹೊಟ್ಟೆಯಲ್ಲಿ ಮಗು ಗರ್ಭದರಿಸಿದೆ ಎಂದು ಆ ಪೋಷಕರಿಗೆ ವೈದ್ಯೆ ಸುಳ್ಳು ಹೇಳಿದ್ದಳು. ಹೀಗಿರುವಾಗ ಹುಬ್ಬಳ್ಳಿಯ ಆಸ್ಪತ್ರೆ ಕೆಲಸಕ್ಕೆ ರಾಜೀನಾಮೆ ನೀಡಿದ್ದ ರಶ್ಮಿ, ಬೆಂಗಳೂರಿನ ಖಾಸಗಿ ಆಸ್ಪತ್ರೆ ಸೇರಿದ್ದರು.
ಆಗ ಅದೇ ಸಮಯದಲ್ಲಿಯೇ ಚಾಮರಾಜಪೇಟೆ ಬಿಬಿಎಂಪಿ ಆಸ್ಪತ್ರೆಯಲ್ಲಿ ಹುಸ್ನಾ ಬಾನು ಎಂಬುವವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆಸ್ಪತ್ರೆಗೆ ವೈದ್ಯೆಯಂತೆ ಬಂದಿದ್ದ ರಶ್ಮೀ ಮಗುವನ್ನು ಅಪಹರಿಸಿಕೊಂಡು ಹೋಗಿ ದಂಪತಿಗೆ ನೀಡಿದ್ದಾರೆ. ಶಿಶುವನ್ನು ವೈದ್ಯೆಯಿಂದ ಪಡೆದುಕೊಂಡಿದ್ದ ದಂಪತಿ ತಮ್ಮ ಮಗುವೆಂದೇ ಭಾವಿಸಿದ್ದರು. ಇದಕ್ಕೆ ಪ್ರತಿಯಾಗಿ ರೂ.15 ಲಕ್ಷ ಪಡೆದಿದ್ದರು ಎನ್ನಲಾಗಿದೆ.
ಇತ್ತ ಮಗು ಕಳವಾದ ಹಿನ್ನೆಲೆಯಲ್ಲಿ ಮಗುವಿಗಾಗಿ ಕುಟುಂಬಸ್ಥರು ಆಸ್ಪತ್ರೆಯಲ್ಲಿ ತೀವ್ರವಾಗಿ ಹುಡುಕಾಡಿದ್ದಾರೆ. ಬಳಿಕ ಹತಾಶರಾಗಿ ಚಾಮರಾಜಪೇಟೆ ಠಾಣೆಗೆ ದೂರು ನೀಡಿದ್ದಾರೆ.
ವರ್ಷವಾದರೂ ಮಗು ಪತ್ತೆಯಾಗದ ಹಿನ್ನೆಲೆಯಲ್ಲಿ ಬೇಸರಗೊಂಡು ಪೋಷಕರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಶೀಘ್ರವೇ ಮಗು ಪತ್ತೆ ಹಚ್ಚುವಂತೆ ಪೊಲೀಸರಿಗೆ ಸೂಚಿಸಿತ್ತು.
ನ್ಯಾಯಾಲಯದ ಸೂಚನೆ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ್ದ ಪೊಲೀಸರು, ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸತತ ಪರಿಶೀಲನೆ ಹಾಗೂ ಟವರ್ ಲೊಕೇಶನ್ ಮೂಲಕ ಕಳೆದೊಂದು ವರ್ಷದಿಂದ ಪೊಲೀಸರು 35 ಸಾವಿರಕ್ಕೂ ಹೆಚ್ಚು ಮೊಬೈಲ್ ನಂಬರ್ ಟ್ರಾಯಕ್ ಮಾಡಿದ್ದರು.
ಶಿಶು ಅಪಹರಣವಾದ ದಿನ ರಶ್ಮಿ ತಮ್ಮ ಮೊಬೈಲ್ನಲ್ಲಿ ಗೂಗಲ್ ಮೂಲಕ ಹಲವು ಹೆರಿಗೆ ಆಸ್ಪತ್ರೆಗಳ ಮಾಹಿತಿ ಕಲೆ ಹಾಕಿರುವ ಸುಳಿವು ಸಿಕ್ಕಿತ್ತು. ಈ ಆಧಾರದ ಮೇಲೆ ಇತ್ತೀಚೆಗೆ ಅವರ ಚಲನವಲನ ಪರಿಶೀಲಿಸಿ ಮೇ 29ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಇವರು ಕೊಟ್ಟ ಮಾಹಿತಿ ಆಧರಿಸಿ ಬಾಗಲಕೋಟೆಗೆ ತೆರಳಿದ ಪೊಲೀಸರು ದಂಪತಿಯನ್ನು ಪತ್ತೆಹಚ್ಚಿ ಅವರಿಗೆ ಮಾಹಿತಿ ನೀಡಿ ಮಗುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.