ನಕಲಿ ಪೊಲೀಸರಿಂದ ವೆಹಿಕಲ್ ಚೆಕ್ಕಿಂಗ್ ನೆಪದಲ್ಲಿ ಬೈಕ್ ರಾಬರಿ! | ಜನತಾ ನ್ಯೂಸ್
ಬೆಂಗಳೂರು : ಪೊಲೀಸರ ಸೋಗಿನಲ್ಲಿ ವಾಹನ ತಪಾಸಣೆ ನಡೆಸಿದ ನಕಲಿ ಪೊಲೀಸಗಳು, ಬೈಕ್ ಪಡೆದು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಬಿಸ್ವಾಸ್ ರಾಯ್ ಎಂಬುವರು ನೀಡಿದ ದೂರಿನ ಮೇರೆಗೆ ನಗರದ ನಿವಾಸಿಗಳಾದ ಶರತ್ ಶೆಟ್ಟಿ, ಪೂರ್ವಿಕ್ ರಾಜ್, ಮೋಹನ್ ಕುಮಾರ್ ಹಾಗೂ ತಪಸ್ ರಾಯ್ ಎಂಬುರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಎರಡು ಬೈಕ್ ಹಾಗೂ 41 ಸಾವಿರ ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಕೃತ್ಯದಲ್ಲಿ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ನಗರ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಮೇ 25 ರಂದು ನೈಸ್ ರಸ್ತೆ ಕೊಮ್ಮಘಟ್ಟ ಮೇಲ್ಸೇತುವೆ ಬಳಿ ಬಿಸ್ವಾಸ್ ರಾಯ್ ಎಂಬುವರು ಬೈಕ್ ನಲ್ಲಿ ಹೋಗುವಾಗ ಪೊಲೀಸರ ಸೋಗಿನಲ್ಲಿ ಇವರ ವಾಹನ ತಡೆದು ಕೊರೊನಾ ನಿಯಮ ಉಲ್ಲಂಘಿಸಿದ್ದೀರ ಎಂದು ಹೇಳಿ, ಬೈಕ್ ಜಪ್ತಿ ಮಾಡಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಬಂದು ವಾಹನ ಬಿಡಿಸಿಕೊಂಡು ಹೋಗಿ ಎಂದು ಹೇಳಿದ್ದಾರೆ. ಪೊಲೀಸರೆಂದು ನಂಬಿದ ರಾಯ್ ಬೈಕ್ ಬಿಟ್ಟು ಬಂದಿದ್ದಾರೆ.
ಮಾರನೇ ದಿನ ಠಾಣೆಗೆ ಹೋಗಿ ವಿಚಾರಿಸಿದಾಗ ವಿಷಯ ತಿಳಿದಿದೆ. ನಂತರ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಪಡೆದು ತನಿಖೆ ನಡೆಸಿ, ಸ್ಥಳದಲ್ಲಿ ಸೆರೆಯಾದ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ, ಬಂಧನ ಮಾಡಲಾಗಿದೆ.
ಪ್ರಕರಣ ಆರೋಪಿಗಳ ಪೈಕಿ ಪಶ್ಚಿಮ ಬಂಗಾಳ ಮೂಲದ ಆರೋಪಿ ತಪಸ್ ರಾಯ್ ಎಂಬಾತ ದೂರುದಾರ ಬಿಸ್ವಾಸ್ ರಾಯ್ ಜೊತೆ ಬಾರ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ಕೆಲಸ ಮಾಡಿ ಹಣ ನೀಡಲು ಮಾಲೀಕ ಸತಾಯಿಸುತ್ತಿದ್ದರಿಂದ ಆಕ್ರೋಶಗೊಂಡು ಸ್ನೇಹಿತರಿಗೆ ಸುಲಿಗೆ ಮಾಡುವ ಐಡಿಯಾ ಕೊಟ್ಟಿದ್ದ.
ಬಸವೇಶ್ವರ ನಿವಾಸಿ ಶರತ್ ಶೆಟ್ಟಿ ಸಿವಿಲ್ ಇಂಜಿನಿಯರ್, ಪೂರ್ವಿಕ್ ರಾಜ್ ನಾಲ್ಕನೇ ಸೆಮಿಸ್ಟರ್ ಇಂಜಿನಿಯರ್ ವಿದ್ಯಾರ್ಥಿಗಳಾಗಿದ್ದಾರೆ. ಮತ್ತೋರ್ವ ಆರೋಪಿ ಮೋಹನ್ ಕುಮಾರ್ ಕಂಪ್ಯೂಟರ್ ಆಪರೇಟರ್ ಆಗಿದ್ದಾನೆ.