ಪುಲ್ವಾಮಾದಲ್ಲಿ ಬಿಜೆಪಿ ಮುಖಂಡ, ಪುರಸಭೆ ಸದಸ್ಯನನ್ನು ಗುಂಡಿಕ್ಕಿ ಹತ್ಯೆಗೈದ ಉಗ್ರರು | ಜನತಾ ನ್ಯೂಸ್
ಜಮ್ಮು-ಕಾಶ್ಮೀರ : ಬಿಜೆಪಿ ಮುಖಂಡ, ಪುರಸಭೆ ಸದಸ್ಯನನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದಿದೆ.
ರಾಕೇಶ್ ಪಂಡಿತ ಎಂಬ ಕೌನ್ಸಿಲರ್ ಮೇಲೆ ಈ ಗುಂಡಿನ ದಾಳಿಯನ್ನು ನಡೆಸಲಾಗಿತ್ತು. ಗಂಭೀರ ಪರಿಸ್ಥಿತಿಯಲ್ಲಿದ್ದ ರಾಕೇಶ್ ಪಂಡಿತ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸುವ ಪ್ರಯತ್ನಗಳು ಆಗಿತ್ತು. ಆದರೆ ತೀವ್ರ ಪ್ರಮಾಣದ ಗಾಯಗಳು ಆಗಿದ್ದ ಪರಿಣಾಮವಾಗಿ ಅವರು ಮೃತಪಟ್ಟಿದ್ದಾರೆ.
ರಾಕೇಶ್ ಪಂಡಿತ್ ಪುಲ್ವಾಮಾದ ಟ್ರಾಲ್ ಪ್ರದೇಶದಲ್ಲಿನ ಸ್ನೇಹಿತನ ಮನೆಯಲ್ಲಿದ್ದಾಗ ಮೂವರು ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಗುಂಡು ತಗುಲಿದ್ದ ರಾಕೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ದಾಳಿಯಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ.
ಗಾಯಗೊಂಡ ಮಹಿಳೆಯನ್ನು ಅಸೀಫಾ ಮುಸ್ತಖ್ ಎಂದು ಗುರುತಿಸಲಾಗಿದ್ದು, ಆಕೆಯನ್ನು ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ
ಕೌನ್ಸಿಲರ್ ರಾಕೇಶ್ ಶ್ರೀನಗರದ ಸುರಕ್ಷಿತ ಪ್ರದೇಶದಲ್ಲಿ ವಾಸವಾಗಿದ್ದರು. ಅವರಿಗೆ ರಕ್ಷಣೆಗಾಗಿ ಇಬ್ಬರು ಪೊಲೀಸರನ್ನು ಕೂಡ ನಿಯೋಜನೆ ಮಾಡಲಾಗಿತ್ತು. ಆದರೆ ಘಟನೆ ನಡೆದ ಸಂದರ್ಭದಲ್ಲಿ ರಾಕೇಶ್ ಅವರ ಜೊತೆಗೆ ಈ ಸಿಬ್ಬಂದಿಗಳು ಇರಲಿಲ್ಲ ಎನ್ನಲಾಗಿದೆ.