ಮ್ಯಾನ್ಹೋಲ್ ಕ್ಲೀನಿಂಗ್ ವೇಳೆ ಮೂವರು 3 ಕಾರ್ಮಿಕರ ದುರ್ಮರಣ! | ಜನತಾ ನ್ಯೂಸ್
ರಾಮನಗರ : ಮ್ಯಾನ್ಹೋಲ್ನಲ್ಲಿ ಸಿಲುಕಿದ್ದ ಮೂವರು ಕಾರ್ಮಿಕರು ಮೃತಪಟ್ಟ ಘಟನೆ ರಾಮನಗರದ ಐಜೂರು ನಗರದಲ್ಲಿ ನಡೆದಿದೆ.
ರಾಮನಗರ ಟೌನ್ ವ್ಯಾಪ್ತಿಯ ನೇತಾಜಿ ಪಬ್ಲಿಕ್ ಸ್ಕೂಲ್ ಪಕ್ಕದಲ್ಲಿ ಮ್ಯಾನ್ಹೋಲ್ ಕ್ಲೀನ್ ಮಾಡಲು ಇಳಿದಿದ್ದ 3 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಶವ ಹೊರಕ್ಕೆ ತೆಗೆಯಲಾಯಿತು.
ನಗರ ವ್ಯಾಪ್ತಿಯಲ್ಲಿ ಬರುವ ನೇತಾಜಿ ಪಬ್ಲಿಕ್ ಸ್ಕೂಲ್ ಪಕ್ಕದಲ್ಲಿ ಘಟನೆ ನಡೆದಿದ್ದು, ಮ್ಯಾನ್ಹೋಲ್ಗೆ ಇಳಿದಾಗ 3 ಕಾರ್ಮಿಕರು ಮೃತಪಟ್ಟಿದ್ದಾರೆ.
ಬೆಂಗಳೂರಿನ ಕಮಲಾನಗರ ನಿವಾಸಿಗಳಾದ ಮಂಜುನಾಥ್, ರಾಜೇಶ್, ಮಂಜುನಾಥ್ ಮೃತರು. ಗುತ್ತಿಗೆದಾರ ಹರೀಶ್ ಎಂಬುವವರಿಗೆ ಮ್ಯಾನ್ಹೋಲ್ ಕಾಮಗಾರಿಯನ್ನು ವಹಿಸಲಾಗಿತ್ತು. ಆಯತಪ್ಪಿ ಬಿದ್ದ ಒಬ್ಬನನ್ನು ರಕ್ಷಿಸಲು ಮುಂದಾದ ಇಬ್ಬರು ಕಾರ್ಮಿಕರೂ ಸೇರಿ, ಮೂರು ಜನರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಬಂದಿದ್ದ ಕಾರ್ಮಿಕರು ಯಾವುದೇ ಮುಂಜಾಗ್ರತಾ ಕ್ರಮಗಳನ್ನಕೈಗೊಳ್ಳದೆ ಮ್ಯಾನ್ಹೋಲ್ನಲ್ಲಿ ಯುಜಿಡಿ ಲಿಂಕ್ ಕಾಮಗಾರಿ ನಡೆಸಲು ಮ್ಯಾನ್ಹೋಲ್ಗೆ ಇಳಿದಿದ್ದರು. ಈ ವೇಳೆ ಉಸಿರಾಟ ಸಮಸ್ಯೆಯಾಗಿ ಮ್ಯಾನ್ಹೋಲ್ನಲ್ಲಿ ಸಿಲುಕಿ ಅಸ್ವಸ್ಥರಾಗಿದ್ದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮ್ಯಾನ್ಹೋಲ್ನಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಮೇಲೆತ್ತಿ ರಾಮನಗರ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.