ವಿವಿಧ ರಾಜ್ಯ ನೌಕರ ಸಂಘಗಳಿಂದ ವೇತನ ಪರಿಷ್ಕರಣೆ ಬಗ್ಗೆ ಪ್ರತಿಭಟನೆ
ಬೆಂಗಳೂರು : ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ, ಸಚಿವಾಲಯ ನೌಕರ ಸಂಘ, ವಿಧಾನಪರಿಷತ್ ಸಚಿವಾಲಯ ನೌಕರ ಸಂಘ, NPS, ನೌಕರರ ಸಂಘ ಸೇರಿದಂತೆ ವಿವಿಧ ವೃಂದ ಸಂಘಗಳ ಪ್ರತಿನಿಧಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದ ನೌಕರರ ವೇತನಕ್ಕೆ ಸರಿ ಸಮಾನವಾದ ವೇತನವನ್ನು ರಾಜ್ಯ ನೌಕರರಿಗೂ ನೀಡಲು ಒತ್ತಾಯಿಸಿದವು. ಕರ್ನಾಟಕ ರಾಜ್ಯ 6ನೇ ವೇತನ ಆಯೋಗ ಮಾಡಿರುವ ಶಿಪಾರಸುಗಳು ಕೇಂದ್ರ ಸರ್ಕಾರದ ನೌಕರರ ವೇತನಕ್ಕೆ ಸರಿಸಮನಾದ ವೇತನ ಭತ್ಯೆಗಳನ್ನು ಶಿಫಾರಸ್ಸು ಮಾಡುವಲ್ಲಿ ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧ ಕಛೇರಿಗಳ ಮುಂದೆ ದಿನಾಂಕ 9 ಫೆಬ್ರುವರಿ 2018ರಿಂದ ನೌಕರರ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿತ್ತು.
ದಿನಾಂಕ ಫೆಬ್ರುವರಿ 15 2018 ರಂದು ಗುರುವಾರ ಬೆಂಗಳೂರಿನ ಆನಂದರಾವ್ ಸರ್ಕಲ್ ನ, ಗಾಂಧಿಪ್ರತಿಮೆ ಎದುರು ಒಂದು ದಿನದ ಧರಣಿ ಸತ್ಯಾಗ್ರಹ ವನ್ನು ಏರ್ಪಡಿಸಲಾಗಿದೆ. ಈ ಧರಣಿಯು ಬೆಳಿಗ್ಗೆ 11ಗಂಟೆಯಿಂದ ಸಂಜೆ 5ಗಂಟೆಯ ವರೆಗೂ ನಡೆಯಲಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವಿವಿಧ ಸಂಘಟನೆಗಳು ಮತ್ತು ವಿವಿಧ ಇಲಾಖಾ ವೃಂದಗಳ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಈ ಕುರಿತು ಸೂಚನೆ ಹೊರಿಡಿಸಿದ್ದು, ನೌಕರ ಬಾಂದವರಲ್ಲಿ ಭಾಗವಹಿಸುವಂತೆ ವಿನಂತಿಸಿಕೊಂಡಿದೆ.
1998ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ನೌಕರರ ಹೋರಾಟವಿಲ್ಲದೆ, ಕೇಂದ್ರ ನೌಕರರ ವೇತನ ಪಡೆಯಲು ಸಾದ್ಯವಾಗಲಿಲ್ಲ. ಪ್ರತಿವರ್ಷ ರಾಜ್ಯ ನೌಕರರು ಸರಾಸರಿ ರೂ 7000/- ಕೋಟಿಯಷ್ಟು ವೇತನ ಭತ್ಯೇ ಸೌಲಭ್ಯವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದ್ದು. ಈ ಸ್ಥಿತಿ ಮುಂದುವರೆದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರ ವೇತನ-ಭತ್ಯೆ ವ್ಯತ್ಯಾಸ ಇನ್ನೂ ಹೆಚ್ಚಲಿದ್ದು, ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿವಿಧ ನೌಕರರ ಸಂಘಗಳು ಜಂಟಿ ಕ್ರಿಯಾ ಸಮಿತಿ ಅಡಿಯಲ್ಲಿ ಹೋರಾಟಕ್ಕೆ ಮುಂದಾಗಿದೆ.
ಕೇಂದ್ರ ನೌಕರರ ವೇತನವು ದಿನೇ ದಿನೇ ಗಣನೀಯವಾಗಿ ಹೆಚ್ಚುತ್ತಿದ್ದು, ರಾಜ್ಯ ನೌಕರರ ವೇತನ ಪರಿಷ್ಕರಣೆಯ ಬಗ್ಗೆ ರಾಜ್ಯ ಸರ್ಕಾರ ಮೀನಮೇಷ ಎನಿಸುತ್ತಿತ್ತು. ಈಗ ಚುನಾವಣೆ ಸಮೀಪಿಸುತ್ತಿದ್ದಂತೆ 6ನೇ ವೇತನ ಆಯೋಗದ ಶಿಪಾರಸ್ಸು ಪರಿಗಣಿಸುವ ಬಗ್ಗೆ ಹೇಳಲಾಗುತ್ತಿತ್ತು ಎನ್ನಲಾಗಿದೆ. ಆದರೆ ಇಷ್ಟು ದಿನಗಳಿಂದ ತಮ್ಮ ಬೇಡಿಕೆ ಈಡೆರಿಕೆಯಾಗುವ ಬಗ್ಗೆ ಜಾತಕದ ಪಕ್ಷಿಯ ಹಾಗೆ ಕಾಯುತ್ತಿದ್ದ ನೌಕರ ಆಸೆಗೆ, ಆಯೋಗದ ಶಿಪಾರಸ್ಸು ತಣ್ಣೀರೆರಸಿದಂತೆ ತೋರುತ್ತಿದೆ. ಈ ಮೂಲಕ ನೌಕರರ ವೇತನ ಪರಿಷ್ಕರಣೆಯು, ಚುನಾವಣೆ ಸಂದರ್ಭದಲ್ಲಿ ಒಂದು ತೋರಿಕೆಯ ತಂತ್ರ ಎಂದು ಅಭಿಪ್ರಾಯ ವ್ಯಕ್ತವಾಗಿದೆ.