ಪಿಯು ಪರೀಕ್ಷೆ ರದ್ದುಗೊಂಡರೂ ಸಿಇಟಿ ನಡೆಯಲಿದೆ: ಡಿಸಿಎಂ ಅಶ್ವತ್ಥ್ ನಾರಾಯಣ | ಜನತಾ ನ್ಯೂಸ್
ಬೆಂಗಳೂರು : ರಾಜ್ಯದಲ್ಲಿ ಪಿಯು ಪರೀಕ್ಷೆಗಳು ರದ್ದುಗೊಂಡರೂ ಸಿಇಟಿ ನಡೆಯಲಿದೆ. ಸಿಇಟಿ ಅಂಕ ಆಧರಿಸಿ ಮೆಡಿಕಲ್, ಇಂಜಿನಿಯರಿಂಗ್, ಡೆಂಟಲ್ ಸೀಟ್ಗಳನ್ನು ಹಂಚಲಾಗುವುದು.
ಸಿಇಟಿಯನ್ನು ಕೂಡ ನಡೆಸದೇ ವಿದ್ಯಾರ್ಥಿಗಳನ್ನು ಪಾಸ್ ಮಾಡಬಹುದಿತ್ತು. ಆದರೆ ಸಿಇಟಿಯನ್ನೂ ರದ್ದುಗೊಳಿಸಿದರೆ ಮುಂದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಬ ಕಾರಣಕ್ಕೆ ಸಿಇಟಿ ನಡೆಸುತ್ತೇವೆ ಎಂದು ಉಪ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ತಿಳಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಸಿಇಟಿ ಅಂಕ ಆಧರಿಸಿ ಮೆಡಿಕಲ್, ಇಂಜಿನಿಯರಿಂಗ್, ಡೆಂಟಲ್ ಸೀಟ್ಗಳನ್ನು ಹಂಚಲಾಗುತ್ತದೆ. ಸಿಇಟಿ ನಡೆಸದೆಯೇ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಬಹುದಿತ್ತು. ಆದರೆ ಇದರಿಂದಾಗಿ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಸಮಸ್ಯೆಯಾಗಲಿದೆ ಎಂದು ಅಭಿಪ್ರಾಯಿಸಿದರು.
ಇನ್ನು "ಈಗಾಗಲೇ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಈ ಕಾರಣದಿಂದಾಗಿ ಮೆಡಿಕಲ್, ಎಂಜಿನಿಯರಿಂಗ್ ಸೀಟ್ ಪಡೆಯಲು ಪರೀಕ್ಷೆ ನಡೆಸುವುದು ಅತ್ಯವಶ್ಯಕವಾಗಿದೆ. ಈ ಬಗ್ಗೆ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು" ಎಂದು ಹೇಳಿದ್ದಾರೆ.
ಈ ಹಿಂದೆ ಮೆಡಿಕಲ್, ಡೆಂಟಲ್ ಹಾಗೂ ಎಂಜಿನಿಯರಿಂಗ್ ಸೀಟ್ ಹಂಚಿಕೆ ಆಯ್ಕೆ ಮಾಡಲು ಕನಿಷ್ಠ ಅಂಕ ನಿಗದಿ ಮಾಡಲಾಗಿತ್ತು. ಆದರೆ ಈ ಬಾರಿ ಕನಿಷ್ಠ ಅಂಕ ನಿಗದಿಯಿಂದ ತೊಂದರೆ ಉಂಟಾಗುವುದು ಬೇಡ ಎಂಬ ದೃಷ್ಟಿಯಿಂದ ಸಿಇಟಿ ಅಂಕವನ್ನು ಮಾತ್ರ ಪರಿಗಣನೆ ಮಾಡಲು ಈಗಾಗಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಲಹೆ ನೀಡಿದ್ದಾರೆ. ಅವರ ಸಲಹೆ ಸರಿಯಾಗಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಡಿಸಿಎಂ ತಿಳಿಸಿದ್ದಾರೆ.