ವರದಕ್ಷಿಣೆ ದಾಹಕ್ಕೆ ಸಿವಿಲ್ ಇಂಜಿನಿಯರ್ ಪತ್ನಿ ಬಲಿ! ಪತ್ನಿ ನೇಣಿಗೆ ಶರಣು! | ಜನತಾ ನ್ಯೂಸ್
ಕಲಬುರಗಿ : ವರದಕ್ಷಿಣೆ ಕಿರುಕುಳದಿಂದ ನೊಂದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬ್ಯಾಂಕ್ ಕಾಲೋನಿಯಲ್ಲಿ ನಡೆದಿದೆ.
21 ವರ್ಷದ ರಚಿತಾ ಎಂಬುವವರೇ ಸಾವಿಗೆ ಶರಣಾದ ಗೃಹಿಣಿ. ಸಿವಿಲ್ ಇಂಜಿನಿಯರ್ ವೀರಣ್ಣ ಎಂಬುವರ ಜತೆ ಮದುವೆಯಾಗಿದ್ದ ರಚಿತಾ ಕಲಬುರಗಿಯ ಬ್ಯಾಂಕ್ ಕಾಲನಿಯಲ್ಲಿ ವಾಸವಿದ್ದಳು.
ಸಿವಿಲ್ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ವೀರಣ್ಣ, ಮದುವೆಯಾದ ಬಳಿಕ ಹಣಕ್ಕಾಗಿ ಪತ್ನಿಯನ್ನು ಪೀಡಿಸಿ ತೊಂದರೆ ಕೊಡ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.
ಮದುವೆ ಆದ ದಿನದಿಂದಲೂ ವರದಕ್ಷಿಣೆ ತರುವಂತೆ ರಚಿತಾಗೆ ಗಂಡ ಕಿರುಕುಳ ಕೊಟ್ಟಿದ್ದನಂತೆ. ರಚಿತಾಳ ಸಾವಿಗೂ ಮುನ್ನಾ ದಿನವೂ ತವರು ಮನೆಯಿಂದ ಹಣ ತರುವಂತೆ ಪೀಡಿಸಿ ಗಲಾಟೆ ಮಾಡಿದ್ದನಂತೆ.
ಇದರಿಂದ ಬೇಸತ್ತು ಮನೆಯಲ್ಲೇ ರಚಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಚಿತಾ ಸಾವು ಸಂಬಂಧ ಪತಿ ವೀರಣ್ಣ, ಮಾವ ಚಂದ್ರಕಾಂತ, ಅತ್ತೆ ಲಕ್ಷ್ಮಿಬಾಯಿ, ಮೈದುನ ಪವನ್ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ನಾಲ್ವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.