ಕಾಂಗ್ರೆಸ್ನ ಲಸಿಕೆ ಪ್ರಸ್ತಾವನೆ ತಿರಸ್ಕರಿಸಿ, ಕಾರಣವನ್ನೂ ನೀಡಿದ ರಾಜ್ಯ ಸರ್ಕಾರ ! | ಜನತಾ ನ್ಯೂಸ್
ಬೆಂಗಳೂರು : ರಾಜ್ಯದ ಜನತೆಗೆ ಲಸಿಕೆ ವಿತರಿಸಲು 100 ಕೋಟಿ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಘೋಷಿಸಿದ್ದರು. ಕಾಂಗ್ರೆಸ್ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ 100 ಕೋಟಿ ರೂಪಾಯಿಗಳಲ್ಲಿ ಕೊರೋನಾ ಲಸಿಕೆಗೆ ನೀಡಲಾಗಿತ್ತು. ಆದರೆ ರಾಜ್ಯ ಸರ್ಕಾರ ಕಾಂಗ್ರೆಸ್ನ 100 ಕೋಟಿ ರೂಪಾಯಿಯನ್ನು ನಿರಾಕರಿಸಿದೆ.
ಕೇಂದ್ರ ಸರ್ಕಾರವೇ ಉಚಿತವಾಗಿ ಲಸಿಕೆ ಪೂರೈಕೆ ಮಾಡಲಿದೆ. ಹೀಗಾಗಿ ಸರ್ಕಾರದಲ್ಲಿ ಸಂಪನ್ಮೂಲ ಕೊರತೆಯಾಗಿಲ್ಲ. ನೀವು ಸಹಾಯಧನ ಕೊಡಲು ಇಚ್ಛಿಸಿದರೆ ಸರ್ಕಾರ ನಿಗದಿಪಡಿಸಿದ ನಿಧಿಗೆ ನೀಡಬಹುದು ಎಂದು ಸಿದ್ದರಾಮಯ್ಯಗೆ ಸರ್ಕಾರ ಬರೆದಿರುವ ಪತ್ರದಲ್ಲಿ ಉಲ್ಲೇಖವಾಗಿದೆ.
ಈಗಾಗಲೇ ಸರ್ಕಾರ ಶಾಸಕರ ನಿಧಿಯ ಶೇ.25 ರಷ್ಟು ಅನುದಾನವನ್ನು ಕೊವಿಡ್ ನಿಯಂತ್ರಣ ಕಾರ್ಯಗಳಿಗೆ ಬಳಸಲು ಅವಕಾಶವಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡಲು ಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆ ಕಾರ್ಯಕ್ರಮಗಳಿಗೆ ಸರ್ಕಾರದಲ್ಲಿ ಸಂಪನ್ಮೂಲ ಕೊರತೆ ಇಲ್ಲ. ಕಾಂಗ್ರೆಸ್ ಪಕ್ಷ ಮತ್ತು ಶಾಸಕರು ಲಸಿಕೆ ಕಾರ್ಯಕ್ರಮಕ್ಕೆ ಸಹಾಯಧನ ನೀಡಲು ಇಚ್ಛಿಸಿದಲ್ಲಿ ತಮ್ಮ ವೈಯಕ್ತಿಕ ಹಣವನ್ನು ಸರ್ಕಾರ ನಿಗದಿಪಡಿಸಿದ ನಿಧಿಗೆ ದೇಣಿಗೆ ನೀಡಬಹುದು ಎಂದು ಪತ್ರದಲ್ಲಿ ಉಲ್ಲೇಖವಾಗಿದೆ.
ನಿಮ್ಮ ನಿಲುವು ಸ್ವಾಗತಾರ್ಹವಾದುದು, ಆದರೆ ಕೇಂದ್ರವೇ ಎಲ್ಲರಿಗು ಉಚಿತವಾಗಿ ಲಸಿಕೆ ನೀಡಲಿದೆ. ಲಸಿಕೆಗೆ ಧನ ಸಹಾಯ ಮಾಡಲು ಹಲವು ಸಂಸ್ಥೆಗಳು ಮುಂದೆ ಬಂದಿವೆ. ಅಲ್ಲದೆ ಈಗಾಗಲೇ ಎಲ್ಲಾ ಶಾಸಕರ ಶೇ.25 ರಷ್ಟು ಅನುದಾನ ಬಳಕೆ ಮಾಡಲಾಗಿದೆ. ಆ ಹಣ ಕೋವಿಡ್ ಕಾರ್ಯಕ್ರಮಗಳಿಗೆ ಬಳಕೆಯಾಗಿದೆ. ಉಳಿದ ಶೇ.75 ರಷ್ಟು ಹಣ ಕ್ಷೇತ್ರಾವಾರು ಅಭಿವೃದ್ಧಿ ಯೋಜನೆಗಳಿಗೆ ಬಳಸಿಕೊಳ್ಳಿ. ಒಂದು ವೇಳೆ ನಿಮ್ಮ ಸ್ವಂತ ಹಣ ನೀಡುವುದಾದರೆ, ಅದನ್ನ ಸಂಘ ಸಂಸ್ಥೆಗಳಿಗೆ ನೀಡಿ ಎಂದು ಸರ್ಕಾರ ಕಾಂಗ್ರೆಸ್ ಮನವಿಗೆ ಮರುತ್ತರ ನೀಡಿದೆ.