ಜೂನ್.14ರ ನಂತರ ಕರ್ನಾಟಕದಲ್ಲಿ 4 ರಿಂದ 5 ಹಂತದಲ್ಲಿ ಅನ್ಲಾಕ್ ಪ್ರಕ್ರಿಯೆ ಆರಂಭ: ಸಚಿವ ಆರ್. ಅಶೋಕ್ | ಜನತಾ ನ್ಯೂಸ್
ಬೆಂಗಳೂರು : COVID-19 ಪ್ರೇರಿತ ಲಾಕ್ಡೌನ್ ಅಂತ್ಯಗೊಳ್ಳುವು ದರಿಂದ ಜೂನ್ 14 ರ ನಂತರ ರಾಜ್ಯದಲ್ಲಿ ನಾಲ್ಕರಿಂದ ಐದು ಹಂತಗಳಲ್ಲಿ ಅನ್ಲಾಕ್ ಮಾಡುವ ಸಾಧ್ಯತೆ ಇದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಜೂನ್ 14ಕ್ಕೆ ಲಾಕ್ಡೌನ್ ಮುಕ್ತಾಯವಾಗಿ ಏಕಾಏಕಿ ಒಂದೇ ಸಲಕ್ಕೆ ಅನ್ಲಾಕ್ ಮಾಡುವುದಿಲ್ಲ. 5 ಹಂತಗಳಲ್ಲಿ ರಾಜ್ಯದಲ್ಲಿ ಅನ್ಲಾಕ್ ಪ್ರಕ್ರಿಯೆ ನಡೆಯಲಿದೆ ಎಂದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಕೊರೋನಾ ಸಾವುಗಳು ಹಾಗೂ ಹೊಸ ಪ್ರಕರಣಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, COVID ಸೋಂಕಿನ ಪ್ರಮಾಣವನ್ನು ಮತ್ತಷ್ಟು ತಗ್ಗಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದ್ದು, ಒಂದೇ ಸಮಯದಲ್ಲಿ ಲಾಕ್ಡೌನ್ ಅನ್ನು ಸಡಿಲಿಸುವುದು ಸಾಧ್ಯವಿಲ್ಲ. ಈ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಆರೋಗ್ಯ ಸಚಿವ ಕೆ.ಸುಧಾಕರ್ ಮತ್ತು ನಾನು ಮುಖ್ಯಮಂತ್ರಿಯೊಂದಿಗೆ ವಿವರವಾದ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.
ಆದರೆ, ಜೂನ್ 14ರ ನಂತರ ರಾಜ್ಯದಲ್ಲಿ ಅನ್ಲಾಕ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಬಹುಶಃ ಇದನ್ನು ನಾಲ್ಕರಿಂದ ಐದು ಹಂತಗಳಲ್ಲಿ ಮಾಡಬಹುದು. ಮೊದಲ ಹಂತದಲ್ಲಿ ಈಗ ಬೆಳಿಗ್ಗೆ 6 ರಿಂದ 10 ರ ನಡುವೆ ಇರುವ ಶಾಪಿಂಗ್ಗಾಗಿ ಸಮಯವನ್ನು ಇನ್ನಷ್ಟು ವಿಸ್ತರಿಸಬಹುದು. ವ್ಯಾಯಾಮ ಮತ್ತು ವಾಯುವಿಹಾರಕ್ಕಾಗಿ ಉದ್ಯಾನಗಳಿಗೆ ಭೇಟಿ ನೀಡಲು ಅವಕಾಶ ನೀಡುವ ಬಗ್ಗೆ ಕೂಡ ಸರ್ಕಾರದ ಮಟ್ಟದಲ್ಲಿ ಚಿಂತನೆಗಳು ನಡೆಯುತ್ತಿವೆ.
ಲಾಕ್ಡೌನ್ ಯಾವ ರೀತಿ ತೆರೆಯಬೇಕು, ಮೊದಲ ಹಂತದಿಂದ ಯಾವುದಕ್ಕೆಲ್ಲಾ ವಿನಾಯಿತಿ ನೀಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ, ಪಾಸಿಟಿವಿಟಿ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಅನ್ ಲಾಕ್ ನಡೆಸಲಾಗುವುದು. ಅಂತರ್ ಜಿಲ್ಲೆ, ಸಾರಿಗೆ ವ್ಯವಸ್ಥೆ ಓಡಾಟ ಆರಂಭ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು.