ಮುಂದಿನ ಎರಡು ವರ್ಷ ನಾನೇ ಮುಖ್ಯಮಂತ್ರಿ : ಬಿಎಸ್ ಯಡಿಯೂರಪ್ಪ | ಜನತಾ ನ್ಯೂಸ್
ಹಾಸನ : ಕರ್ನಾಟಕ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರೇ ಮುಂದಿನ ಎರಡು ವರ್ಷ ಕಾಲ ಮುಂದುವರಿಯಲಿದ್ದಾರೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ನಿನ್ನೆಯಷ್ಟೇ ದೆಹಲಿಯಲ್ಲಿ ಸ್ಪಷ್ಟಪಡಿಸಿದ ಬಳಿಕ ಇದೇ ಮೊದಲ ಬಾರಿಗೆ ಯಡಿಯೂರಪ್ಪ ಅವರು ಆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಹಾಸನ ಜಿಲ್ಲೆಯ ಜಿಪಂ ಹೊಯ್ಸಳ ಸಭಾಂಗಣದಲ್ಲಿ ಕೊರೊನಾ ಹಾಗೂ ಜಿಲ್ಲೆಯ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಉಸ್ತುವಾರಿ ಅರುಣ್ಸಿಂಗ್ ಅವರೇ ಸಿಎಂ ಎರಡುವರ್ಷ ಇರುತ್ತಾರೆ, ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದ ಬಳಿಕ ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
ಅರುಣ್ಸಿಂಗ್ ತಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ತಮ್ಮ ಜವಾಬ್ದಾರಿ ಹೆಚ್ಚಿಸಿದೆ, ಪ್ರಧಾನಿ ನರೇಂದ್ರಮೋದಿ ಹಾಗೂ ಅಮಿತ್ಶಾ ಅವರು ತನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಪೂರಕವಾಗಿ ಇನ್ನಷ್ಟು ಶಕ್ತಿ ಮೀರಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಉಸ್ತುವಾರಿಯೇ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ. ಅವರ ನೇತೃತ್ವದಲ್ಲಿ ಒಳ್ಳೆ ಕೆಲಸ ಆಗ್ತಿದೆ, ಆಗಬೇಕೆಂದಿದ್ದಾರೆ. ಹೀಗೆಂದು ಹೇಳಿದ ಮೇಲೆ ನನ್ನ ಜವಾಬ್ದಾರಿ ಜಾಸ್ತಿ ಆಗಿದೆ. ಮೋದಿ, ಅಮಿತ್ ಶಾ ನನ್ನ ಮೇಲೆ ಪ್ರೀತಿ ವಿಶ್ವಾಸವಿಟ್ಟಿದ್ದಾರೆ. ಅದನ್ನು ಉಳಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದೂ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ರಾಜ್ಯಕ್ಕೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಶೀಘ್ರದಲ್ಲೇ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅವರು ನಮ್ಮ ಪಕ್ಷದ ಉಸ್ತುವಾರಿ ಇದಾರೆ. ಹಾಗಾಗಿ ಬರ್ತಾರೆ, ಚರ್ಚೆ ಮಾಡ್ತಾರೆ, ಸಲಹೆ ಕೊಡ್ತಾರೆ ಎಂದು ಯಡಿಯೂರಪ್ಪ ಹೇಳಿದರು.
ಸದ್ಯದಲ್ಲೇ ರಾಜ್ಯಾಧ್ಯಂತ ಪ್ರವಾಸ ಕೈಗೊಂಡು, ಅಭಿವೃದ್ಧಿ ಕೆಲಸಕ್ಕೆ ಮತ್ತಷ್ಟು ಚುರುಕು ನೀಡಲಿದ್ದೇನೆ. ಬಿಜೆಪಿ ಹೈಕಮಾಂಡ್ ಒಪ್ಪುವಂತೆ ಕೆಲಸ ಮಾಡಲಿದ್ದೇನೆ. ಸಿಎಂ ಬದಲಾವಣೆ ಮಾತೇ ಇಲ್ಲ. ಮುಂದಿನ 2 ವರ್ಷದ ಅವಧಿಗೆ ನಾನೇ ಸಿಎಂ ಎಂಬುದಾಗಿ ತಿಳಿಸಿದರು.