ಕೋವಿಡ್ ಗಾಯದ ಮೇಲೆ ಬರೆ : ಶುಲ್ಕ ಪಾವತಿಸಲು ಕೊನೆಯ ಗಡುವು ಪ್ರಕಟಿಸಿದ ಖಾಸಗಿ ಶಾಲೆಗಳು | ಜನತಾ ನ್ಯೂಸ್
ಬೆಂಗಳೂರು : ಕೋವಿಡ್ ಲಾಕ್ ಡೌನ್ ಇನ್ನೂ ತೆರವುಗೊಳ್ಳುವ ಮೊದಲೇ ರಾಜಧಾನಿಯ ಖಾಸಗಿ ಶಾಲೆಗಳು ಮಕ್ಕಳ ಪ್ರವೇಶ ಶುಲ್ಕವನ್ನು ಭರಿಸಲು ಪಾಲಕರು/ಪೋಷಕರ ಮೇಲೆ ಒತ್ತಡ ಹೇರುತ್ತಿರುವುದು ಪೋಷಕರನ್ನು ಇನ್ನೂ ಕಷ್ಟಕ್ಕೆ ತಳ್ಳುತ್ತಿದೆ. ಈಗಾಗಲೇ ಬಹುತೇಕ ಶಾಲೆಗಳು ಆನ್ಲೈನ್ ಶಿಕ್ಷಣ ಪ್ರಾರಂಭಿಸಲು ಕಳೆದ ಬಾರಿಯ ಮಾದರಿಯಲ್ಲಿ ಪೋಷಕರ ಸಮ್ಮತಿ ನೀಡುವಂತೆ ಕೇಳಿದೆ ಹಾಗೆಯೇ ಕಳೆದ ಬಾರಿಯ ಮಾದರಿಯಲ್ಲಿ ಹಲವು ಖಾಸಗಿ ಶಾಲೆಗಳು ಈಗಾಗಲೇ ಆನ್ಲೈನ್ ಶಿಕ್ಷಣವನ್ನು ಶುರು ಮಾಡಿವೆ.
ಕಳೆದ ವರ್ಷ ಶೇ.70ರಷ್ಟು ಶುಲ್ಕವನ್ನು ಸರ್ಕಾರ ನಿಗದಿಪಡಿಸಿತ್ತು ಆದರೂ, ಇದನ್ನು ಬಹುತೇಕ ಖಾಸಗಿ ಶಾಲೆಗಳು ಕಾರ್ಯರೂಪಕ್ಕೆ ತಂದಿಲ್ಲ, ಇನ್ನೂ ಕೆಲವು ಶಾಲೆಗಳು ಕಣ್ಣೊರೆಸುವ ರೀತಿ ಸ್ವಲ್ಪ ರಿಯಾಯಿತಿ ನೀಡಿ ಸುಮ್ಮನಾಗಿದೆ ಅಷ್ಟೇ.
ಈಗ ಖಾಸಗಿ ಶಾಲೆಗಳು, ಪ್ರಸ್ತುತ ಶೈಕ್ಷಣಿಕ ವರ್ಷದ ಶುಲ್ಕವನ್ನು ಭರಿಸಬೇಕೆಂದು ಪೋಷಕರಿಗೆ ಕಳೆದ 2 ತಿಂಗಳಿಂದಲೇ ಸಂದೇಶಗಳನ್ನು ಕಳುಹಿಸುತ್ತಿದ್ದು, ಈಗ ಈ ಸಂದೇಶಗಳು ಗಡುವಾಗಿ ಪರಿವರ್ತನೆಗೊಂಡಿದೆ. ಇದು ಆರ್ಥಿಕವಾಗಿ ತೊಂದರೆಯಲ್ಲಿರುವ ಪಾಲಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಈಗ ಖಾಸಗಿ ಶಾಲೆಗಳಂತೂ ಜೂನ್ 15ರೊಳಗೆ ಮೊದಲ ಕಂತು ತುಂಬಲು ಕೊನೆ ದಿನವನ್ನು ನಿಗದಿ ಮಾಡಿದ್ದರೂ, ರಾಜ್ಯ ಸರ್ಕಾರ ಈ ಕುರಿತು ಯಾವುದೇ ಕ್ರಮ ಪ್ರಕಟಿಸಿಲ್ಲ.
ಕಳೆದ 2020-21 ಶೈಕ್ಷಣಿಕ ವರ್ಷವೂ ಕೂಡ ಕೋವಿಡ್ ಹಿನ್ನೆಲೆಯಲ್ಲಿ, ಸಂಪೂರ್ಣವಾಗಿ ಶಾಲೆಗಳು ಆನ್ಲೈನ್ ಮೂಲಕ ನಡೆದಿದ್ದು, ವಿದ್ಯಾರ್ಥಿಗಳು ಶಾಲೆಯ ಸೌಲಭ್ಯಗಳಾದ ಆಟದ ಮೈದಾನ, ಲ್ಯಾಬ್, ಗ್ರಂಥಾಲಯ, ಕಾರ್ಯಕ್ರಮ, ಕಂಪ್ಯೂಟರ್ ಇತ್ಯಾದಿ ಸೇರಿದಂತೆ ಯಾವುದೇ ರೀತಿಯ ಸೌಲಭ್ಯ ಬಳಸಿರುವುದಿಲ್ಲ. ಬದಲಿಗೆ ಪೋಷಕರು, ಮನೆಯಲ್ಲಿ ಕಂಪ್ಯೂಟರ್, ಲ್ಯಾಪ್ಟಾಪ್, ಟ್ಯಾಬ್, ಮೊಬೈಲ್ ಜೊತೆಗೆ ಡಾಟಾ ಕನೆಕ್ಷನ್, ಪ್ರಿಂಟರ್ ಇತ್ಯಾದಿ ಅಧಿಕ ಖರ್ಚುಗಳನ್ನೂ ಸಹ ಹೊರುವ ಪರಿಸ್ಥಿತಿ ಎದುರಿಸಿದ್ದಾರೆ.
ಆನ್ಲೈನ್ ಶಿಕ್ಷಣ ನೀಡಿದ್ದರೂ ಸಹ, ಇದೊಂದೇ ಬಾರಿಗೆ ಎಂದು ತಿಳಿದು, ಶಾಲೆಗಳ ಆಡಳಿತ ಮಂಡಳಿ ನಿಗದಿಪಡಿಸಿದ ಶುಲ್ಕವನ್ನು ಪಾವತಿಸಿದ್ದರು. ಆದರೆ ಈಗ, ಈ ಬಾರಿಯ ಪರಿಸ್ಥಿತಿ ನೋಡಿದರೆ ಶಾಲೆಗಳು ಅದರಲ್ಲೂ ಪ್ರಾಥಮಿಕ ಶಾಲೆಗಳು ಬಾಗಿಲು ತೆರೆಯುವುದು ಕಷ್ಟಸಾಧ್ಯ. ಮೊದಲೇ ಕೋವಿಡ್ನಿಂದ ಒಂದು ವರ್ಷದಿಂದ ಕಡಿಮೆ ಆದಾಯದ ತೊಂದರೆಯಲ್ಲಿರುವಾಗ, ಈ ರೀತಿಯ ಶುಲ್ಕ ತುಂಬಲು ಗಡುವು ಪೋಷಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಕಳೆದ ವರ್ಷದ ಲಾಕ್ಡೌನ್ ನಿಂದ ಇಲ್ಲಿಯವರೆಗೆ ಕೋವಿಡ್ ಕಾರಣ ಖಾಸಗಿ ಉದ್ಯೋಗಿಗಳಿಗೆ ಸಂಬಳದಲ್ಲಿ ಕಡಿತ ಮಾಡಲಾಗಿದೆ, ವ್ಯಾಪಾರ-ವಹಿವಾಟು ಬಹುತೇಕ ಬಂದ್ ಆಗಿದೆ. ಕಳೆದ ವರ್ಷ ಕೇಂದ್ರ ಸರ್ಕಾರ ಸಾಲದ ಕಂತುಗಳನ್ನು 6 ತಿಂಗಳಗಳ ಕಾಲ ಬಡ್ಡಿರಹಿತ ಮುಂದೂಡಿಕೆ ಮಾಡಿತ್ತು. ಆದರೆ, ಈ ವರ್ಷ ಆ ಪರಿಹಾರ ಕೂಡ ಮದ್ಯಮ ವರ್ಗದವರಿಗೆ ಸಿಕ್ಕಿಲ್ಲ, ಹೀಗಾಗಿ ಬಹುತೇಕರ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇಂತಹ ಸಮಯದಲ್ಲಿ ಖಾಸಗಿ ಶಾಲೆಗಳು ಸಂಪೂರ್ಣ ಅಥವಾ ಹೆಚ್ಚುವರಿ ಶುಲ್ಕವನ್ನು ಇಷ್ಟೇ ದಿನಾಂಕದೊಳಗೆ ತುಂಬಬೇಕು ಎಂಬುದು ಸರಿಯಲ್ಲ. ಕೇವಲ ಬೋಧನಾ ಶುಲ್ಕ ಮಾತ್ರ ತುಂಬುವಂತೆ ಸರ್ಕಾರ ಆದೇಶ ಹೊರಡಿಸಬೇಕು ಎಂದು ಪಾಲಕರು ಮನವಿ ಮಾಡುತ್ತಿದ್ದಾರೆ.