ವಿಶ್ವನಾಥ್ ಬಗ್ಗೆ ಮಾತಾಡಿದರೆ ನನ್ನ ಬಾಯಿ ಹೊಲಸು: ರೇಣುಕಾಚಾರ್ಯ ತಿರುಗೇಟು | ಜನತಾ ನ್ಯೂಸ್
ಬೆಂಗಳೂರು : ನಾನು ಪ್ಯೂರ್ ಬಿಜೆಪಿ, ರೇಣುಕಾಚಾರ್ಯ ಮಿಕ್ಸ್ ಬಿಜೆಪಿ ಎಂಬ ಹೆಚ್ ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ಎಚ್.ವಿಶ್ವನಾಥ್ ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇದೀಗ ಯಡಿಯೂರಪ್ಪ ಸೇರಿದಂತೆ ಯಾರನ್ನೂ ಬಿಟ್ಟಿಲ್ಲ, ಎಲ್ಲರ ಬಗ್ಗೆಯೂ ಹಗುರವಾಗಿ ಮಾತನಾಡಿದ್ದಾರೆ. ವಿಶ್ವನಾಥ್ ರಾಜಕೀಯದಲ್ಲಿ ಹಿರಿಯರು, ಅವರ ಬಾಯಲ್ಲಿ ಅಂತಹ ಶಬ್ಧ ಬರಬಾರದು. ಅವರ ಬಗ್ಗೆ ಮಾತನಾಡಿದರೆ ನನ್ನ ಬಾಯಿ ಹೊಲಸಾಗುತ್ತದೆ ಎಂದು ಕಿಡಿಕಾರಿದರು.
ವಿಶ್ವನಾಥ್ ಅವರ ಆಡಿಯೋ, ವೀಡಿಯೋ ನನ್ನ ಬಳಿ ಇದೆ. ಅವರಿಗೆ ನಾಲಿಗೆ ಸಂಸ್ಕೃತಿ ಎಷ್ಟಿದೆ ಎಂದು ಗೊತ್ತಿದೆ. ಅವರು ವಯಸ್ಸಿನಲ್ಲಿ ಹಿರಿಯರು. ಆದರೂ ಅವರ ಬಾಯಲ್ಲಿ ಬರುವ ಆ ರೀತಿಯ ಶಬ್ದ ಮಾತ್ರ ಅಸಂಬದ್ಧ. ಅವರ ಆಡಿಯೋ ವೀಡಿಯೋ ಕೇಳಿದರೆ ಎಷ್ಟು ಅಸಂಬದ್ಧ ಎಂದು ಗೊತ್ತಾಗುತ್ತದೆ. ಅವರ ಬಗ್ಗೆ ಮಾತಾಡಿರದೆ ನನ್ನ ನಾಲಿಗೆಯೇ ಹೊಲಸಾಗುತ್ತದೆ ಎಂದು ರೇಣುಕಾಚಾರ್ಯ ತಿರುಗೇಟು ನೀಡಿದರು.
ವಿಜಯೇಂದ್ರ ಮೇಲೆ ಕಿಕ್ ಬ್ಯಾಕ್ ಆರೋಪ ವಿಚಾರವಾಗಿ ಮಾತನಾಡಿದ ಅವರು, ಟೆಂಡರ್ ಪಾರದರ್ಶಕವಾಗಿದೆ. ಎಲ್ಲಾ ವಿವರವೂ ವೆಬ್ ಸೈಟ್ ನಲ್ಲಿ ಸಿಗುತ್ತದೆ. ಅವರು ಹತಾಶೆಯಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ಬಗ್ಗೆ ಹೀಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ವಿಶ್ವನಾಥ್ ಯಾವ ಪಕ್ಷಕ್ಕೂ ನಿಷ್ಠವಾಗಿಲ್ಲ ಎಂದು ಹೇಳಿದ್ದು ನಿಜ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಚುನಾವಣೆಗೆ ನಿಲ್ಲುವುದು ಬೇಡ ಎಂದಾಗಲೂ ನಿಂತು ಸೋತರು, ನಂತರದಲ್ಲಿ ಅವರನ್ನು ಎಂಎಲ್ಸಿ ಮಾಡಲಾಯಿತು. ಇದೀಗ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಹತಾಶರಾಗಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು.