ನಾಯಕತ್ವ ಬದಲಾವಣೆ ಇಲ್ಲ, ಬಿಜೆಪಿ ಕೋರ್ ಕಮಿಟಿ ಸಭೆಯ ನಂತರ ಸ್ಪಷ್ಟಪಡಿಸಿದ ಸಚಿವ ಆರ್ ಅಶೋಕ್ | ಜನತಾ ನ್ಯೂಸ್
ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಯಾಗಿಲ್ಲ. ಸಿಎಂ ಯಡಿಯೂರಪ್ಪನವರೇ ನಮ್ಮ ನಾಯಕರು. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಮಾತನ್ನು ಸ್ಪಷ್ಟಪಡಿಸಲೆಂದೇ ರಾಜ್ಯ ಬಿಜೆಪಿ ಉಸ್ತುವಾರಿಯಾದ ಅರುಣ್ ಸಿಂಗ್ ಆಗಮಿಸಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಬಿಜೆಪಿ ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
ನಾನು ಹೇಳಿದರೂ ಯಾಕೆ ಪದೇಪದೆ 15 ದಿನಕ್ಕೊಮ್ಮೆ ನಾಯಕತ್ವದ ಬದಲಾವಣೆ ಕೂಗು ಬರುತ್ತಿದೆ ಎಂದು ಅರುಣ್ ಸಿಂಗ್ ಪ್ರಶ್ನಿಸಿದ್ದು, ಇನ್ಮುಂದೆ ಇಂತಹದ್ದಕ್ಕೆಲ್ಲ ಅವಕಾಶ ನೀಡದಂತೆ ಸೂಚಿಸಿದ್ದಾರೆ ಎಂದರು.
ನಾಯಕತ್ವ ಬದಲಾವಣೆ ಹೇಳಿಕೆ ನೀಡಿದವರ ವಿರುದ್ಧ ಕ್ರಮಕೈಗೊಳ್ಳುವುದು ಖಚಿತ. ಕೆಲವೇ ದಿನದಲ್ಲಿ ಕಠಿಣ ಕ್ರಮಕೈಗೊಳ್ಳುವ ತೀರ್ಮಾನ ಆಗಿದೆ. ಯಾರು ಪಕ್ಷ ಮತ್ತು ಸರ್ಕಾರದ ವಿರುದ್ಧ ಮಾತನಾಡಿದ್ದಾರೋ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ. ದೂರವಾಣಿ ಕದ್ದಾಲಿಕೆ ಕುರಿತು ಶಾಸಕ ಅರವಿಂದ ಬೆಲ್ಲದ್ ಆರೋಪವನ್ನು ಪಕ್ಷ ಪರಿಶೀಲನೆ ಮಾಡಲಿದೆ.
ಇನ್ಮುಂದೆ ಯಾರಾದರೂ ಪಕ್ಷ, ಸರ್ಕಾರದ ವಿರುದ್ಧ ಮಾತನಾಡಿದರೆ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಆರ್.ಅಶೋಕ್ ಎಚ್ಚರಿಸಿದರು. ಸಿಎಂ ಯಡಿಯೂರಪ್ಪ ಸಚಿವ ಸಂಪುಟದ ಪುನಾರಚನೆ ಕುರಿತ ಯಾವುದೇ ಚರ್ಚೆ ಆಗಿಲ್ಲ. ಅದು ಸಿಎಂ ಯಡಿಯೂರಪ್ಪ ಮತ್ತು ಹೈಕಮಾಂಡ್ ವಿವೇಚನೆಗೆ ಬಿಟ್ಟದ್ದಾಗಿದೆ ಎಂದು ತಿಳಿಸಿದರು.
ಕೋರ್ ಕಮಿಟಿ ಸಭೆಯಲ್ಲಿ ಸರ್ಕಾರ ಮತ್ತು ಪಕ್ಷದ ವರ್ಚಸ್ಸು ಜಾಸ್ತಿ ಮಾಡಬೇಕು, ಹೊಂದಾಣಿಕೆಯಿಂದ ಕೆಲಸ ಮಾಡಬೇಕು ಎಂದು ತೀರ್ಮಾನ ಕೈಗೊಳ್ಳಲಾಯಿತು. ತುರ್ತು ಪರಿಸ್ಥಿತಿಯ ಕರಾಳ ಕಾನೂನು ತರುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದು ಜೂನ್ 25ರಂದು ಎಲ್ಲ ತಾಲೂಕಿನಲ್ಲಿ ಕರಾಳ ದಿನಾಚರಣೆಗೆ ನಿರ್ಧಾರ ಮಾಡಲಾಯಿತು.
ಅಂದು ವಿಡಿಯೋ ಸಂವಾದದ ಮೂಲಕ, ತುರ್ತುಪರಿಸ್ಥಿತಿ ವೇಳೆ ಜೈಲಿನಲ್ಲಿದ್ದವರಿಗೆ ಸನ್ಮಾನ ಮಾಡಲು ತೀರ್ಮಾನಿಸಲಾಯಿತು ಎಂದು ಹೇಳಿದರು.ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಇದೆ. ಕೊರೊನಾ ನಿಯಮ ಪಾಲಿಸಿ ಪ್ರತಿ ತಾಲೂಕಿನಲ್ಲಿ ಯೋಗ ದಿನಾಚರಣೆ ಮಾಡಬೇಕು.
ಜೂನ್ 23 ಶಾಮ್ ಪ್ರಕಾಶ್ ಮುಖರ್ಜಿ ಜನ್ಮದಿನದಂದು ಬೂತ್ ಮಟ್ಟದ ಕಾರ್ಯಕ್ರಮ. ಅವರ ಚಿಂತನೆ, ಜೀವನ ಸ್ಫೂರ್ತಿ ಬಗ್ಗೆ ವಿಚಾರ ಸಂಕಿರಣ ಆಯೋಜನೆ ಮಾಡಬೇಕು ಮತ್ತು ಜುಲೈ 6ರವರೆಗೆ ಮುಖರ್ಜಿ ನೆನಪಿಗಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ನಿರ್ಧರಿಸಲಾಗಿದೆ ಎಂದರು.
ಕೊವಿಡ್ ನಿಯಮ ಪಾಲಿಸಿ ರಾಜ್ಯದ ಪ್ರತಿ ತಾಲೂಕಿನಲ್ಲೂ ಯೋಗ ದಿನ ಆಚರಿಸಲಾಗುತ್ತದೆ. ಜಿ.ಪಂ, ತಾ.ಪಂ ಚುನಾವಣೆಗಳಿಗೆ ಸಿದ್ಧತೆ ನಡೆಸಲು ಪಕ್ಷದ ಜಿಲ್ಲಾ ಘಟಕಗಳಿಗೆ ಸೂಚನೆ ನೀಡಲಾಗಿದೆ. ಜೂನ್ 26ರಂದು ಬೆಂಗಳೂರಿನಲ್ಲಿ ರಾಜ್ಯ ಕಾರ್ಯಕಾರಿಣಿ ನಡೆಯಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.