ಆಟದ ವಸ್ತುವೆಂದು ಜಿಲೆಟಿನ್ ತುಂಡನ್ನು ಜಜ್ಜಿದ ಮಕ್ಕಳು: ಡಿಟೋನೇಟರ್ ಸ್ಪೋಟಗೊಂಡು ಮಕ್ಕಳು ಆಸ್ಪತ್ರೆಗೆ ದಾಖಲು | ಜನತಾ ನ್ಯೂಸ್
ಹಾಸನ : ಮಕ್ಕಳು ಆಟವಾಡುವ ಸಂದರ್ಭದಲ್ಲಿ ಸಿಕ್ಕಿದ ಜಿಲೆಟಿನ್ ತಂತಿಯನ್ನು, ಅರಿಯದೇ ಕಲ್ಲಿನಿಂದ ಜಜ್ಜುವಾಗ ಸ್ಫೋಟಗೊಂಡು ಎರಡು ಮಕ್ಕಳಿಗೆ ಗಾಯವಾಗಿರುವ ಘಟನೆ ವಾಟೆಹೊಳೆ ಜಲಾಶಯ ಸಮೀಪದಲ್ಲಿರುವ ಚನ್ನಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.
ಆಲೂರು ತಾಲೂಕಿನ ಚನ್ನೇನಹಳ್ಳಿಯ ನಿವಾಸಿಗಳಾದ ರಘು ಅವರ ಪುತ್ರ ಅಭಿಷೇಕ್ (12) ಹಾಗೂ ರಂಗಸ್ವಾಮಿ ಅವರ ಪುತ್ರಿ ಕೃತಿಕಾ (8) ಗಾಯಗೊಂಡವರು. ಅಭಿಷೇಕ್ ಹಾಗೂ ಕೃತಿಕ ಕೈಗೆ ಸಿಕ್ಕ ಡಿಟೋನೇಟರ್ ತಂದು ಜಜ್ಜಿ ದ್ದಾರೆ.
ಚನ್ನೇನಹಳ್ಳಿಯಲ್ಲಿ ನಡೆಯುತ್ತಿರೋ ಎತ್ತಿನಹೊಳೆ ಕಾಮಗಾರಿ ಕಲ್ಲು ಸಿಡಿಸಲು ತಂದಿದ್ದ ಡಿಟೋನೇಟರ್ಗಳನ್ನ ಗುತ್ತಿಗೆದಾರ ಕೆಲಸಮುಗಿದ ಮೇಲೆ ಅಲ್ಲೇ ಬಿಟ್ಟು ಹೋಗಿದ್ದ. ಸಾಕಷ್ಟು ಪ್ರಮಾಣದಲ್ಲಿದ್ದ ಡಿಟೋನೇಟರ್ ಅನ್ನು ಕುತೂಹಲದಿಂದ ತಂದಿದ್ದ ಮಕ್ಕಳು ಅದನ್ನ ಕಲ್ಲಿನಿಂದ ಜಜ್ಜಿದ್ದಾರೆ. ಕಲ್ಲಿನಿಂದ ಜಜ್ಜುತ್ತಿದ್ದಂತೆ ಡಿಟೋನೇಟರ್ ಸ್ಪೋಟಗೊಂಡು ಮಕ್ಕಳಿಗೆ ತೀವ್ರವಾಗಿ ಗಾಯವಾಗಿದೆ. ಸದ್ಯ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.