ರೇಖಾ ಕದಿರೇಶ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ತನಿಖೆಯ ವೇಳೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಆರೋಪಿಗಳು! | ಜನತಾ ನ್ಯೂಸ್
ಬೆಂಗಳೂರು : ರೇಖಾ ಅವರ ಹತ್ಯೆಗೆ ಸ್ಕೆಚ್ ಹಾಕಿದವನೆ ಈ ಸ್ಟೀಫನ್. ರೇಖಾ ಮನೆಯಿಂದ ಹೊರ ಬಂದು ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಯಾವ ರೀತಿ ಅಟ್ಯಾಕ್ ಮಾಡಬೇಕು. ತಡೆಯಲು ಬರುವವರನ್ನು ಯಾರು ನಿಯಂತ್ರಿಸಬೇಕು , ಸ್ಥಳದಲ್ಲಿ ಆಳವಡಿಸಲಾಗಿದ್ದ ಸಿ.ಸಿ.ಕ್ಯಾಮರಾ ತಿರುಗಿಸುವವರು ಯಾರು ಎಂಬ ಬಗ್ಗೆ ಮೊದಲೆ ನೀಲಿನಕ್ಷೆ ತಯಾರಿಸಿದ್ದ. ಇವನ ಪ್ಲಾನ್ನಂತೆಯೇ ರೇಖಾ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೀಟರ್ ಮತ್ತು ಸೂರ್ಯನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಬೆನ್ನಲ್ಲೆ ಹಂತಕರ ಬಂಧನಕ್ಕೆ ರಚಿಸಲಾಗಿದ್ದ ಪೊಲೀಸರ ಮೂರು ವಿಶೇಷ ತಂಡಗಳು ರೇಖಾ ಕೊಲೆಯ ಮಾಸ್ಟರ್ಮೈಡ್ ಸ್ಟೀಫನ್, ಪರುಷೋತ್ತಮ್ ಹಾಗೂ ಅಜೆಯ್ ಎಂಬುವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ರೇಖಾ ಕದಿರೇಶ್ ಕೊಲೆ ಪ್ರಕರಣ ಸಂಬಂಧ ಬಂಧಿತ ಆರೋಪಿಗಳು ತನಿಖಾ ವೇಳೆ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಕದಿರೇನಹಳ್ಳಿ ಪೊಲೀಸರು ಮಾಲಾ ಸೇರಿದಂತೆ 6 ಮಂದಿಯನ್ನು ಬಂಧಿಸಿದ್ದಾರೆ. ಕದಿರೇಶ್ ಅಕ್ಕ ಮಾಲಾಳನ್ನು ಬಂಧಿಸಿರುವ ಪೊಲೀಸರು ಸತತವಾಗಿ ವಿಚಾರಣೆ ನಡೆಸುತ್ತಿದ್ದು, ಈಕೆಯೇ ಕೊಲೆಯ ಹಿಂದಿನ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿದೆ.
ಕೌಟುಂಬಿಕ ಜಗಳ ಹಾಗೂ ಮುಂಬರುವ ಬಿಬಿಎಂಪಿ ಚುನಾವಣೆಗೆ ಮಗ ಅಥವಾ ಸೊಸೆಯನ್ನು ಕಣಕ್ಕಿಳಿಸಲು ಉದ್ದೇಶಿಸಿದ್ದ ಮಾಲಾ, ರೇಖಾಳ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮಾಲಾ ಈ ಹಿಂದೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಕೂಡ ಆಗಿದ್ದು, ಮಾಲಾಳನ್ನು ನಿರಂತರ ವಿಚಾರಣೆ ನಡೆಸುತ್ತಿರುವ ಪೊಲೀಸರು ಹಲವು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಸುಳಿವು ಸಿಕ್ಕಿದ್ದು ಹೇಗೆ?
ಕೊಲೆ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಬಾರದು ಎಂದು ಹಂತಕರು ಪ್ಲಾನ್ ಹಾಕಿದ್ದರು. ಆದರೆ, ಅನಾಮಿಕನೊಬ್ಬ ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದ ಕೊಲೆ ದೃಶ್ಯ ಎಲ್ಲೆಡೆ ವೈರಲ್ ಆಗಿದ ಪರಿಣಾಮ ಇಂದು ಎಲ್ಲಾ ಹಂತಕರು ಜೈಲು ಸೇರುವಂತಾಗಿದೆ.
ವಿಡಿಯೋದಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಪೀಟರ್ ಮತ್ತು ಸೂರ್ಯ ರೇಖಾ ಅವರ ಮೇಲೆ ದಾಳಿ ಮಾಡಿರುವುದು ರೆಕಾರ್ಡ್ ಆಗಿದೆ. ಮಾತ್ರವಲ್ಲ ರಕ್ಷಿಸಲು ಬರುವ ವ್ಯಕ್ತಿಯೊಬ್ಬನ ಮೇಲೆ ಬಿಂದಿಗೆ ಎಸೆದವನನ್ನು ಸೂರ್ಯ ಎಂದು ಗುರುತಿಸಲಾಗಿದೆ. ಪೀಟರ್ ಮತ್ತು ಸೂರ್ಯ ರೇಖಾ ಅವರ ಮೇಲೆ ಅಟ್ಯಾಕ್ ಮಾಡುತ್ತಿದ್ದಾಗ ಹಂತಕರ ಸುತ್ತ ನಿಂತು ರಕ್ಷಣೆ ನೀಡಿದವರು ಇದೇ ಸ್ಟೀಫನ್, ಅಜಯ್ ಮತ್ತು ಪುರುಷೋತ್ತಮ್ ಎಂದು ಗೊತ್ತಾಗಿದೆ.