ಪಕ್ಷದಲ್ಲಿ ಇರುವ ಮೂವರು ನನ್ನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ: ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಕಿಡಿ | ಜನತಾ ನ್ಯೂಸ್
ನವದೆಹಲಿ: : ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಮಂಗಳವಾರ ದೆಹಲಿಗೆ ಬಂದಿದ್ದಾರೆ. ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಬಂದಿದ್ದೇನೆ. ನಾಳೆ ಸಂಜೆವರೆಗೂ ದೆಹಲಿಯಲ್ಲೇ ಇರುತ್ತೇನೆ. ನಾಳೆ ಮಾಧ್ಯಮಗಳೊಂದಿಗೆ ಮಾತನಾಡುತ್ತೇನೆ ಎಂದು ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ಕಳೆದ 2 ದಿನಗಳಿಂದ ವಿವಿಧ ಮಠಾಧೀಶರು ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿದ್ದರು. ಇದೀಗ ದೆಹಲಿಗೆ ಹೈಕಮಾಂಡ್ ನಾಯಕರ ಭೇಟಿಗೆ ತೆರಳಿದ್ದಾರೆ.
ನಾನು ಯಾರನ್ನು ಭೇಟಿ ಆಗುವೆ ಅನ್ನೋದು ಒಂದು ಅಥವಾ ಎರಡು ಗಂಟೆಯಲ್ಲಿ ಗೊತ್ತಾಗಲಿದೆ. ನಾನು ಈ ಸಂಬಂಧ ವೀಡಿಯೊ ಬಿಡುಗಡೆ ಮಾಡುತ್ತೇನೆ ಎಂದು ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು.
ನಿನ್ನೆ ರಾತ್ರಿ 2 ಗಂಟೆಗೆ ನನಗೆ ದೆಹಲಿಯ ಒಬ್ಬರಿಂದ ಕರೆ ಬಂದಿದೆ. ಅವರ ಆಹ್ವಾನದ ಮೇರೆಗೆ ಇಲ್ಲಿಗೆ ಬಂದಿದ್ದೇನೆ. ಭೇಟಿಯ ನಂತರ ಫೋಟೊ, ವಿಡಿಯೊವನ್ನು ನಾನೇ ಕೊಡುತ್ತೇನೆ ಎಂದು ಅವರು ಹೇಳಿದರು.
ಬಿಜೆಪಿಗೆ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ನನಗೆ ಅನ್ಯಾಯ ಆಗಿಲ್ಲ. ಪಕ್ಷದಲ್ಲಿ ಇರುವ ಮೂವರು ನನ್ನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸುವೆ ಎಂದು ಅವರು ಹೆಸರು ಬಹಿರಂಗ ಪಡಿಸದೇ ಹೇಳಿದರು.
ಮೂವರ ಹೆಸರನ್ನು ಬಹಿರಂಗ ಮಾಡುವ ಸಮಯ ಬರುತ್ತದೆ. ಜೊತೆಯಲ್ಲಿದ್ದೇ ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಬಿದ್ದವನ ಮೇಲೆ ಆಳಿಗೊಂದು ಕಲ್ಲು ಹೊಡೆಯುತ್ತಿದ್ದಾರೆ. ಎಲ್ಲರ ಷಡ್ಯಂತ ಬಯಲಿಗೆಳೆಯುವ ಕಾಲ ಬಂದೆ ಬರಲಿದೆ ಎಂದು ಅವರು ಸ್ವಪಕ್ಷಿಯ ವಿರುದ್ದವೇ ಹೆಚ್ಚು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸಿಡಿ ಪ್ರಕರಣದಿಂದಾಗಿ ಸಚಿವ ಸ್ಥಾನ ಕಳೆದುಕೊಂಡಿದದ ರಮೇಶ್ ಜಾರಕಿಹೊಳಿ ಮತ್ತೆ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಹಲವು ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಇಂದು ಬೆಳಗ್ಗೆ 11.45 ರ ಸುಮಾರಿಗೆ ದೆಹಲಿಗೆ ತೆರಳಿದ್ದು, ಹೈಕಮಾಂಡ್ ನಾಯಕರ ಜೊತೆ ಮಾತುಕತೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.