ವರದಕ್ಷಿಣೆ ಕಿರುಕುಳ: ಆರು ತಿಂಗಳ ಹಿಂದಷ್ಟೇ ಮದ್ವೆ ಆಗಿದ್ದ ಯುವತಿ ಗಂಡನ ಮನೆಯಲ್ಲೇ ನೇಣಿಗೆ ಶರಣು! | ಜನತಾ ನ್ಯೂಸ್
ದಾವಣಗೆರೆ : ದಾವಣಗೆರೆ ಹೊಸ ಕುಂದವಾಡ ಗ್ರಾಮದ ನಿವಾಸಿಯಾಗಿರುವ ರೂಪಾ ವರದಕ್ಷಿಣೆ ಕಿರುಕುಳಕ್ಕೆ ನೇಣಿಗೆ ಶರಣಾಗಿದ್ದಾಳೆ.
ದಾವಣಗೆರೆ ತಾಲೂಕಿನ ಹನುಮನಹಳ್ಳಿ ಗ್ರಾಮದ ಜಯಪ್ರಕಾಶ ಅವರ ಪತ್ನಿ ಎಸ್.ಎಂ. ರೂಪಾ (25) ಮೃತ ದುರ್ದೈವಿ. ಹೊಸ ಕುಂದವಾಡ ಮೂಲದ ರೂಪಾಗೆ ಜಯಪ್ರಕಾಶನ ಜತೆ ಆಕೆಯ ಕುಟುಂಬಸ್ಥರು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಆ ವೇಳೆ ಒಂದೂವರೆ ಲಕ್ಷ ರೂಪಾಯಿ ನಗದು, 9 ತೊಲ ಚಿನ್ನಾಭರಣವನ್ನೂ ನೀಡಲಾಗಿತ್ತು.
ಆದರೆ, ನಿನ್ನೆ(ಜೂ.29) ಬೆಳಗ್ಗೆ ರೂಪಾಳ ಶವ ಗಂಡನ ಮನೆಯಲ್ಲಿ ನೇಣುಬಿಗಿದ ಸ್ಥಿತಿತಿಯಲ್ಲಿ ಪತ್ತೆಯಾಗಿದೆ. ವರದಕ್ಷಿಣೆ ತರುವಂತೆ ಗಂಡನ ಮನೆಯಲ್ಲಿ ನಿತ್ಯ ದೈಹಿಕ ಹಾಗೂ ಮಾನಸಿಕ ಹಿಂಸೆ ಕೊಡಲಾಗುತ್ತಿತ್ತು. ಗಂಡನ ಚಿತ್ರಹಿಂಸೆ ತಾಳಲಾರದೇ ರೂಪಾ ಸಾವಿನ ಮನೆಯ ಕದತಟ್ಟಿದ್ದಾಳೆ ಎನ್ನಲಾಗಿದೆ.
ರೂಪಾ ಪೋಷಕರಿಗೆ ಕರೆ ಮಾಡಿ, ಬೇರೊಬ್ಬನ ಜೊತೆ ಮಾತನಾಡುತ್ತಿದ್ದೀಯಾ ಎಂದು ನನ್ನ ಗಂಡ ಆರೋಪ ಮಾಡುತ್ತಿದ್ದಾರೆ. ಅನುಮಾನ ಪಡುತ್ತಿದ್ದಾರೆ. ಆದರೆ, ನಾನು ಯಾವುದೇ ಕಾರಣಕ್ಕೂ ಸಾಯುವುದಿಲ್ಲ. ಧೈರ್ಯವಾಗಿ ಎದುರಿಸಿ ನನ್ನ ಕಳಂಕವನ್ನು ನಾನೇ ತೊಡೆದು ಹಾಕುತ್ತೇನೆ ಎಂದು ತಾಯಿ ನಿರ್ಮಲಾಗೆ ಕರೆ ಮಾಡಿ ಹೇಳಿದ್ದಳಂತೆ. ವರದಕ್ಷಿಣೆ ಕಿರುಕುಳ ನೀಡಿ ನಮ್ಮ ಮಗಳನ್ನು ಹೊಡೆದು ಕೊಲೆ ಮಾಡಿ ಈಗ ನೇಣು ಹಾಕಿದ್ದಾರೆ ಎಂದು ಮೃತಳ ಪೋಷಕರು ಆರೋಪ ಮಾಡಿದ್ದಾರೆ.
ಘಟನೆ ಸಂಭವಿಸುತ್ತಿದ್ದಂತೆ ಗಂಡ ನಾಪತ್ತೆಯಾದ್ದು, ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಮೃತಳ ಪಾಲಕರು ಮಾಯಕೊಂಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.