ರಾಜ್ಯ ಕಾಂಗ್ರೆಸ್ ನಲ್ಲಿ ಪಂಚ ಕೌರವರು ಅಧಿಕಾರ ಹಿಡಿಯಲು ಹವಣಿಸುತ್ತಿದ್ದಾರೆ: ಈಶ್ವರಪ್ಪ | ಜನತಾ ನ್ಯೂಸ್
ಶಿವಮೊಗ್ಗ : ಮಹಾಭಾರತ ಎಂದ ಕೂಡಲೇ ಪಂಚ ಪಾಂಡವರು ನೆನಪು ಬರುತ್ತಾರೆ. ಆದರೆ ರಾಜ್ಯದಲ್ಲಿ ಪಂಚ ಕೌರವರು ಕಾಣಸಿಗುತ್ತಿದ್ದಾರೆ. ರಾಜ್ಯದಲ್ಲಿ ಪಂಚ ಕೌರವರು ಅಧಿಕಾರ ಹಿಡಿಯಬೇಕೆಂದು ಪ್ರಯತ್ನಿಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ನಾಯಕರನ್ನು ಟೀಕಿಸಿದರು.
ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪರಮೇಶ್ವರ್, ತನ್ವಿರ್ ಸೇಠ್ ಮುಖ್ಯಮಂತ್ರಿ ರೇಸ್ ನಲ್ಲಿದ್ದಾರೆ ಎಂದ ಅವರು, ಸಮಾಜವಾದವನ್ನ, ಸಾಮಾಜಿಕ ನ್ಯಾಯ ನೀಡುವುದಾಗಿ ಕೇವಲ ಬಾಯಿ ಮಾತಲ್ಲಿ ಹೇಳಿ ಸಿದ್ದರಾಮಯ್ಯ ಸಿಎಂ ರೇಸ್ ನಲ್ಲಿದ್ದಾರೆ ಎಂದು ಕುಟುಕಿದರು.
ಸಮಾಜವಾದವನ್ನು, ಸಾಮಾಜಿಕ ನ್ಯಾಯ ನೀಡುವುದಾಗಿ ಕೇವಲ ಬಾಯಿ ಮಾತಲ್ಲಿ ಹೇಳುವ ಸಿದ್ಧರಾಮಯ್ಯ ಸಿಎಂ ರೇಸ್ ನಲ್ಲಿದ್ದಾರೆ. ವ್ಯಕ್ತಿ ಪೂಜೆ ಮಾಡಬಾರದೆಂದು ಸ್ವತಃ ಡಿ.ಕೆ. ಶಿವಕುಮಾರ್ ಒಂದು ಕಡೆ ಹೇಳುತ್ತಾರೆ. ಇನ್ನೊಂದೆಡೆ ಚಾಮರಾಜ ನಗರದಲ್ಲಿ ಕಾರ್ಯಕರ್ತರ ಮೂಲಕ ನಾನೇ ಸಿಎಂ ಎಂದು ಹೇಳಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ದಲಿತ ಮುಖ್ಯಮಂತ್ರಿ ಎಂದು ಹೇಳಿ ಪರಮೇಶ್ವರ್ ನಾನೇ ಮುಖ್ಯಮಂತ್ರಿ ಎಂದು ಹೇಳಿಸುತ್ತಿದ್ದಾರೆ. ಇತ್ತ ಅಲ್ಪ ಸಂಖ್ಯಾತರಿಂದ ತನ್ವೀರ್ ಸೇಠ್ ನಾನೇ ಮುಖ್ಯಮಂತ್ರಿ ಎಂದು ಹೇಳಿಸುತ್ತಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದ್ದಿದ್ದರೆ, ಜನರಿಂದ ತಿರಸ್ಕಾರ ಗೊಂಡ ಬಳಿಕ ಸುಮ್ಮನಿರಬೇಕಿತ್ತು.
ಧರ್ಮವನ್ನು ಹಾಳು ಮಾಡುವ ಕಾಂಗ್ರೆಸ್ ಪಕ್ಷವನ್ನು ಜನರೇ ತಿರಸ್ಕಾರ ಮಾಡಿ ಹೊರಗಟ್ಟಿದ್ದಾರೆ. ಆದರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವಾಗಲೇ, ತಾವು ಮುಖ್ಯಮಂತ್ರಿ ಎಂದು ಇವರು ಬಡಿದಾಡಿಕೊಳ್ಳುತ್ತಿದ್ದಾರೆ ಎಂದು ಸಚಿವ ಈಶ್ವರಪ್ಪ ವ್ಯಂಗ್ಯವಾಡಿದರು.