ಚಾಮರಾಜಪೇಟೆ ಪಿಎಸ್ಐ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ, ಸಿಐಡಿ ತನಿಖೆ ಆರಂಭ! | ಜನತಾ ನ್ಯೂಸ್
ಮಂಗಳೂರು : ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆ ಪಿಎಸ್ಐ ವಿಶ್ವನಾಥ್ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ ಹೈಕೋರ್ಟ್ ಆದೇಶದನ್ವಯ ಸಿಐಡಿಗೆ ಹಸ್ತಾಂತರಗೊಂಡಿದ್ದು, ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಚಾಮರಾಜಪೇಟೆ ಪೊಲೀಸ್ ಠಾಣೆಯ ಪಿಎಸ್ಐ ವಿಶ್ವನಾಥ್ ಬಿರಾದರ್, ಪ್ರಕರಣವೊಂದರ ಸಂಬಂಧ ದೂರು ನೀಡಲು ಬಂದ ಯುವತಿಯನ್ನು ಪರಿಚಯ ಮಾಡಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದರು. ನಂತರ ಧರ್ಮಸ್ಥಳಕ್ಕೆ ಕರೆ ತಂದು ಲಾಡ್ಜ್ನಲ್ಲಿ ಅತ್ಯಾಚಾರ ಮಾಡಿರುವುದಾಗಿ ಧರ್ಮಸ್ಥಳ ಠಾಣೆಯಲ್ಲಿ 2020ರ ನವೆಂಬರ್ 11 ರಂದು ಸಂತ್ರಸ್ತ ಯುವತಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಗೆ 2020ರ ಆಗಸ್ಟ್ ತಿಂಗಳಲ್ಲಿ ಲ್ಯಾಪ್ಟಾಪ್ ಕಳವಾದ ಬಗ್ಗೆ ದೂರು ನೀಡಲು ತೆರಳಿದ್ದಾಗ ಪಿಐಎಸ್ ವಿಶ್ವನಾಥ್ ಬಿರಾದಾರ್ ಪರಿಚಯವಾಗಿದ್ದರು. ದಿನ ಕಳೆದಂತೆ ಸಲುಗೆ ಬೆಳೆದು ಮದುವೆಯ ಪ್ರಸ್ತಾವನೆ ಇಟ್ಟರು. ಕಳೆದ ವರ್ಷ ನ. 10ರಂದು ಮದುವೆಯ ನೆಪದಲ್ಲಿ ಧರ್ಮಸ್ಥಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಹೋಟೆಲ್ನಲ್ಲಿ ರೂಮ್ ಪಡೆದು ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ನಡೆಸಿದ್ದರು ಎಂದು ಅತ್ಯಾಚಾರದ ದೂರು ನೀಡಿದ್ದರು.
ಬಿರಾದಾರ್ ದೂರಿನ ಪ್ರಕಾರ, ಯುವತಿ ಮದುವೆಯಾಗುವಂತೆ ಒತ್ತಾಯಿಸಿದ್ದಳು. ಮದುವೆಗೆ ಒಪ್ಪದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಬೆದರಿಕೆ ಒಡ್ಡಿದ್ದಲ್ಲದೆ, ಹತ್ತು ಲಕ್ಷ ರೂಪಾಯಿ ಕೊಡಬೇಕೆಂಬ ಬೇಡಿಕೆಯನ್ನೂ ಇಟ್ಟಿದ್ದಳು. ಒಂದೊಮ್ಮೆ ಹಣ ನೀಡದೇ ಹೋದರೆ ರೇಪ್ ಕೇಸ್ ಹಾಕುವುದಾಗಿ ಬೆದರಿಸಿದ್ದಳು ಎಂದು ಹೇಳಲಾಗಿದೆ.
ಅತ್ಯಾಚಾರ ಆರೋಪ ಪ್ರಕರಣ ಕೇಳಿಬಂದ ಬೆನ್ನಲ್ಲೇ ಪಿಎಸ್ಐ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಇನ್ನು ಪ್ರಕರಣದ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ವಿಶ್ವನಾಥ್ ಬಿರಾದಾರ್ ಸಲ್ಲಿಸಿದ್ದ ಅರ್ಜಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ನ್ಯಾಯಾಲಯ 2020ರ ಡಿ.19ರಂದು ಮಾನ್ಯ ಮಾಡಿತ್ತು.
ಈ ಸಮಯದಲ್ಲಿ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಪಿಎಸ್ಐ ವಿಶ್ವನಾಥ್ ಬಿರಾದರ್ ಅವರಿಗೆ ನೀಡಿರುವ ಜಾಮೀನು ರದ್ದು ಮಾಡಿ ಆರೋಪಿಯನ್ನು ತಕ್ಷಣ ಬಂಧಿಸುವಂತೆ ಹಾಗೂ ಇದರ ಜೊತೆಗೆ ಧರ್ಮಸ್ಥಳ ಪಿಎಸ್ಐ ಪವನ್ ಕುಮಾರ್ ಹಾಗೂ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಅಗಿದ್ದ ಸಂದೇಶ್ ಮತ್ತು ಕೆಲ ಸಿಬ್ಬಂದಿ ವಿರುದ್ಧ ಮೂರು ತಿಂಗಳಲ್ಲಿ ದಕ್ಷಿಣ ಕನ್ನಡ ಎಸ್ಪಿ ತನಿಖೆ ಮಾಡಿ ವರದಿ ನೀಡಲು ಆದೇಶ ಮಾಡಿತ್ತು.
ಈ ಸಂಬಂಧ ಸಂತ್ರಸ್ತ ಯುವತಿ ಪ್ರಕರಣವನ್ನು ಸಿಐಡಿ ಮುಖಾಂತರ ತನಿಖೆ ಮಾಡಲು ಹೈಕೋರ್ಟ್ಗೆ ತನ್ನ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದರು. ಇದೀಗ ಪ್ರಕರಣವನ್ನು ಸಿಐಡಿ ತನಿಖೆ ನಡೆಸಲು ಆದೇಶ ಮಾಡಿದ್ದು, ಅದರಂತೆ ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಪ್ರಕರಣದ ಎಲ್ಲಾ ದಾಖಲೆ ಹಾಗೂ ವಸ್ತುಗಳನ್ನು ಬೆಂಗಳೂರಿನ ಸಿಐಡಿ ಕಚೇರಿಗೆ ಹಸ್ತಾಂತರ ಮಾಡಲಾಗಿದೆ.