ನಾನೇನು ಅಂಬರೀಶ್ ಅವರ ಗುಲಾಮ ಆಗಿದ್ದೆನಾ? ಜನಸಾಮಾನ್ಯರು ಬಂದರೂ ನಾನು ಕೈಕಟ್ಟಿ ನಿಲ್ಲುತ್ತೇನೆ! | ಜನತಾ ನ್ಯೂಸ್
ಬೆಂಗಳೂರು : ಅಂಬರೀಶ್ ಮುಂದೆ ನಾನು ಕೈಕಟ್ಟಿ ನಿಂತಿರುತ್ತಿದ್ದೆ ಹೌದು. ನಾನು ಸಾರ್ವಜನಿಕರ ಮುಂದೆಯೂ ಕೈಕಟ್ಟಿ ನಿಲ್ಲುತ್ತಿದ್ದೆ. ಆದರೆ, ಇವರು ಹೇಳುವಂತೆ ನಾನೇನು ಅಂಬರೀಶ್ಗೆ ಗುಲಾಮ ಆಗಿದ್ನಾ? ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನೇನು ಅಂಬರೀಶ್ ಅವರ ಗುಲಾಮ ಆಗಿದ್ದೆನಾ?. ಜನಸಾಮಾನ್ಯರು ಬಂದರೂ ನಾನು ಕೈಕಟ್ಟಿ ನಿಲ್ಲುತ್ತೇನೆ. ಈ ವಿಚಾರವನ್ನು ದಯವಿಟ್ಟು ವೈಭವೀಕರಿಸುವುದು ಬೇಡ.ಕಳೆದ ಎರಡು ದಿನದ ಹಿಂದೆ ನಾನು ಹೇಳಿದ್ದ ಹೇಳಿಕೆ ಬಗ್ಗೆ ಸ್ಕೋಪ್ ಕೊಡುವ ಅವಶ್ಯಕತೆ ಇಲ್ಲ" ಎಂದಿದ್ದಾರೆ.
"ದೇಶ ಹಾಗೂ ರಾಜ್ಯದಲ್ಲಿ ಅನೇಕ ಸಮಸ್ಯೆಗಳಿದ್ದು, ಆ ಬಗ್ಗೆ ಮಾಧ್ಯಮದವರು ಗಮನಹರಿಸಬೇಕು. ಕುಮಾರಸ್ವಾಮಿ ಭ್ರಷ್ಟಾಚಾರ ವಿಚಾರದಲ್ಲಿ ಅಂಬಾಸಿಡರ್ ಎಂದು ಹೇಳಿದ್ದಾರೆ. ಹೌದು, ನಾನು ಭ್ರಷ್ಟಾಚಾರ ಅಂಬಾಸಿಡರ್. ನಾನು ಹಾಗೂ ನನ್ನ ಕುಟುಂಬ ಅನೇಕ ವರ್ಷಗಳಿಂದ ಭ್ರಷ್ಟಾಚಾರ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದೇವೆ. ಭ್ರಷ್ಟ ಅಧಿಕಾರಿಗಳ ಹಾಗೂ ಭ್ರಷ್ಟಾಚಾರದ ವಿರುದ್ದ ದಾಖಲೆ ಸಮೇತವಾಗಿ ಹೋರಾಟ ನಡೆಸುತ್ತಿದ್ದೇವೆ" ಎಂದು ಹೇಳಿದ್ದಾರೆ.
ಭ್ರಷ್ಟ ಅಧಿಕಾರಿಗಳು, ಭ್ರಷ್ಟಾಚಾರದ ವಿರುದ್ಧ ದಾಖಲೆ ಸಮೇತ ಹೋರಾಟ ಮಾಡಿದ್ದೇವೆ. ಆ ಹೆಣ್ಣು ಮಗಳ ಬಗ್ಗೆ ಇದೀಗ ಯಾವುದೇ ಚರ್ಚೆ ಮಾಡುವುದು ಬೇಡ. ಮುಂದಿನ ಚುನಾವಣೆ ಸಂದರ್ಭದಲ್ಲಿ ನಾನು ಮಾತಾಡುತ್ತೇನೆ ಎಂದರು.